ಸಚಿವ ಈಶ್ವರಪ್ಪ ವಜಾಗೆ ಕಾಂಗ್ರೆಸ್ ಪಟ್ಟು – ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ…

50
firstsuddi

ಬೆಂಗಳೂರು : ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ, ಗದ್ದಲ, ಕೋಲಾಹಲ ಮುಂದುವರಿದಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು, ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು ಧಿಕ್ಕಾರ ಘೋಷಣೆ ಕೂಗಿದರು. ಗದ್ದಲದ ನಡುವೆಯೇ ಸ್ಪೀಕರ್ ಪ್ರಶ್ನೋತ್ತರ ಕಲಾಪ ಆರಂಭಿಸಿದರು.

ಕಲಾಪ ನಡೆಯಲು ಬಿಡಲ್ಲ ಎನ್ನುವುದು ಸರಿಯಲ್ಲ. ವಿಧಾನಸಭೆ ಪ್ರಜಾಪ್ರಭುತ್ವದ ದೇವಸ್ಥಾನವಾಗಿದೆ. ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಸಚಿವರ ರಾಜೀನಾಮೆಗೆ ಆಗ್ರಹಿಸಿ ಧರಣಿ, ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಸದನದ ಹೊರಗೆ ಎಲ್ಲಿಬೇಕಾದರೂ ಪ್ರತಿಭಟನೆ ಮಾಡಿ. ಒಂದು ವಿಚಾರಕ್ಕಾಗಿ ಕಲಾಪ ಹಾಳುಮಾಡುವುದು ಸರಿಯಲ್ಲ. ಇದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವಿಧಾನಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಒತ್ತಾಯ ಮಾಡಿದ್ದಾರೆ.

ಯಾವುದೇ ಪ್ರತಿಭಟನೆ ಮಾಡುವುದಿದ್ದರೆ ವಿಧಾನಸಭೆಯಿಂದ ಹೊರಗೆ ಹೋಗಿ ಪ್ರತಿಭಟನೆ ಮಾಡಿಕೊಳ್ಳಿ. ನಿಮ್ಮ ಧರಣಿಯಿಂದ ಇತರೆ ಶಾಸಕರಿಗೆ ತೊಂದರೆಯಾಗುತ್ತಿದೆ. ಕೇವಲ ಒಂದೇ ವಿಚಾರಕ್ಕೆ ಕಲಾಪವನ್ನು ಹಾಳುಮಾಡಬೇಡಿ. ಬೇರೆ ಸದಸ್ಯರಿಗೆ ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ಮನವಿ ಮಾಡಿಕೊಂಡರು. ಪರಸ್ಪರ ಗದ್ದಲ ಗಲಾಟೆ ಹಿನ್ನಲೆ ವಿಧಾನಸಭೆ ಕಲಾಪವನ್ನ ಸ್ಪೀಕರ್ ಮುಂದೂಡಿಕೆ ಮಾಡಿದರು.