ಸಾವಿರಾರು ಜನರನ್ನು ಕೊಂದ ಟಿಪ್ಪುವಿನ ಚರಿತ್ರೆ ನಮ್ಮ ಮಕ್ಕಳು ಓದುವುದು ಬೇಡ – ಶೋಭಾ ಕರಂದ್ಲಾಜೆ.

242
firstsuddi

ಉಡುಪಿ: ಟಿಪ್ಪುವಿನ ಯಾವುದೇ ದಾಖಲೆ ಪಠ್ಯದಲ್ಲಿ ಇರಬಾರದು ಅನ್ನೋದು ನಮ್ಮ ಅಭಿಪ್ರಾಯ ಆದ್ದರಿಂದ ಪಾಠ್ಯದಿಂದ ಟಿಪ್ಪು ವಿಚಾರ ತೆಗೆದು ಹಾಕೋದು ಒಳ್ಳೆಯ ಕ್ರಮ. ಬಹುಸಂಖ್ಯಾತರಿಗೆ ಅನ್ಯಾಯ, ಮತಾಂತರ ಮಾಡಿದ ಟಿಪ್ಪುವಿನ ಪಠ್ಯ ಬೇಡ ಎಂದು ಉಡುಪಿ –ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಶಾಲೆಗಳಲ್ಲಿ ಟಿಪ್ಪುವಿನ ಪಠ್ಯವನ್ನು ಕೈ ಬಿಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಯಿಸಿದ ಅವರು ಟಿಪ್ಪು ಒಬ್ಬ ದಾಳಿಕೋರ, ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಲ್ಲದೆ ಹಿಂದುಗಳನ್ನು ಗುಡ್ಡದಿಂದ ತಳ್ಳಿ ಟಿಪ್ಪು ಡ್ರಾಪ್ ನಿರ್ಮಾಣ ಮಾಡಿದ್ದು, ಮದಕರಿ ನಾಯಕನ ಕುಟುಂಬ ನಿರ್ವಂಶ ಮಾಡಿದ್ದಾನೆ.

ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಟಿಪ್ಪು ಜಯಂತಿ ಬೇಡ ಅಂತ ವಿನಂತಿಸಿದ್ವಿ ಈಗ ಯಡಿಯೂರಪ್ಪ ಅವರ ಸರ್ಕಾರ ತಿಂಗಳೊಳಗೆ ಟಿಪ್ಪು ಜಯಂತಿ ರದ್ದು ಮಾಡಿದೆ ಹಾಗೂ ನಮ್ಮ ಬಿಜೆಪಿ ಸರಕಾರ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಟಿಪ್ಪುವಿನ ಚರಿತ್ರೆಯನ್ನು ಯಾಕಾಗಿ ದಾಖಲಿಸಬೇಕು? ರಾಜ್ಯದ ಅಭಿವೃದ್ಧಿ ಮಾಡಿದ ಮೈಸೂರು ಒಡೆಯರಿಗೆ ಬೆನ್ನಿಗೆ ಚೂರಿ ಹಾಕಿದವ ಟಿಪ್ಪು ಆದ್ದರಿಂದ ಟಿಪ್ಪುವಿನ ಯಾವುದೇ ದಾಖಲೆ ಪಠ್ಯದಲ್ಲಿ ಇರಬಾರದು ಅನ್ನೋದು ನಮ್ಮ ಅಭಿಪ್ರಾಯ. ಸಾವಿರಾರು ಜನರನ್ನು ಕೊಂದ ಟಿಪ್ಪುವಿನ ಚರಿತ್ರೆ ನಮ್ಮ ಮಕ್ಕಳು ಓದುವುದು ಬೇಡ ಮಕ್ಕಳಿಗೆ ಓದಲು ಬಹಳಷ್ಡು ಮಹಾಪುರುಷರ ಚರಿತ್ರೆ ಇದೆ. ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ನಾವು ಓದಬೇಕು, ಟಿಪ್ಪು ಇತಿಹಾಸ ತಿರುಚುವ ಪ್ರಶ್ನೆ ಇಲ್ಲ. ಟಿಪ್ಪುವನ್ನು ವೈಭವೀಕರಿಸಿ ಸಾಕಷ್ಟು ಪುಸ್ತಕಗಳು ಬಂದಿವೆ ಎಂದರು.

ಟಿಪ್ಪುವನ್ನು ಓದುವವರಿಗೆ ಮಾರ್ಕೆಟ್ ನಲ್ಲಿ, ಲೈಬ್ರೆರಿಯಲ್ಲಿ ಪುಸ್ತಕ ಸಿಗುತ್ತೆ ಸಿದ್ದರಾಮಯ್ಯ, ಕುಮಾರಸ್ವಾಮಿ ಈ ಪುಸ್ತಕ ಓದಿಕೊಳ್ಳಲಿ ಬೇಕಿದ್ದರೆ ಅವರ ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಅದನ್ನೇ ಓದಲಿ ಎಂದರು.