ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣ ಮುಂದುವರೆದಿದ್ದು, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಸ್ ನಿಲ್ದಾಣ ಬಳಿ ಮುಸ್ಲಿಂ ಯುವಕನಿಗೆ ಹಿಂದೂ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.
ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್(22) ಹಲ್ಲೆಗೊಳಗಾದ ಯುವಕ. ಆಶಿಕ್ ಆಟೋ ಚಾಲಕನಾಗಿದ್ದು, ನಿನ್ನೆ ರಾತ್ರಿ 9 ಗಂಟೆಗೆ ಉಜಿರೆ ಆಟೋ ನಿಲ್ದಾಣದಲ್ಲಿದ್ದಾಗ ಎಸ್ಡಿಎಂ ಕಾಲೇಜಿನ ಬೆಂಗಳೂರು ಮೂಲದ ವಿದ್ಯಾರ್ಥಿನಿ ಆತನ ಆಟೋ ಹತ್ತಿದ್ದಳು. ಯುವತಿ ಧರ್ಮಸ್ಥಳದಿಂದ ಬೆಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಸಂಚರಿಸಲು ಧರ್ಮಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಳು. ಬಳಿಕ ಯುವತಿಯನ್ನು ಕರೆತಂದ ಆಶಿಕ್, ಬಸ್ ನಿಲ್ದಾಣದ ಬಳಿ ಆಟೋ ನಿಲ್ಲಿಸಿ ಲಗೇಜ್ ಇಳಿಸುತ್ತಿದ್ದ. ಈ ವೇಳೆ ನಾಲ್ಕು ಬೈಕ್ನಲ್ಲಿ ಬಂದ ಹಿಂದೂ ಯುವಕರ ಗುಂಪು ಆಶಿಕ್ನನ್ನು ಪ್ರಶ್ನಿಸಿದ್ದಾರೆ.
ಬಳಿಕ ಹಿಂದೂ ಯುವತಿಯನ್ನು ಈ ರಾತ್ರಿಯಲ್ಲಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಆಶಿಕ್ನನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಗ್ಗೆ ಆಶಿಕ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.










