ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ನಿರ್ಮಿಸಿರುವ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ.
ಈಗಾಗಲೇ 3 ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದ್ದು, ಡಿ.29 ರಂದು ಮತದಾನ ಪ್ರಕ್ರಿಯೆ ಮೂಲಕ ಆಯ್ಕೆ ನಡೆದಿತ್ತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿನ 11 ಸದಸ್ಯರು ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಿದ್ದಾರೆ.
ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಶಿಲ್ಪಿಗಳಾದ ಕರ್ನಾಟಕ ರಾಜ್ಯ ಮೈಸೂರು ಮೂಲದ ಅರುಣ್ ಯೋಗಿರಾಜ್, ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರ ಮೂರ್ತಿಗಳನ್ನ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಸತ್ಯನಾರಾಯಣಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲನ್ನು ಬಳಕೆ ಮಾಡಿದ್ದಾರೆ.
ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ ಅದರ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿ ಪಡೆಯಲಾಗಿದೆ. ನಂತರ ಆಯ್ಕೆಯಾಗುವ ಮೂರ್ತಿಯನ್ನ ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.










