ಆಸ್ತಿಗಾಗಿ 5 ತಿಂಗಳ ಮಗುವಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಲೆಗೈದ ಮಲತಾಯಿ…

124
firstsuddi

ಯಾದಗಿರಿ: ಮಹಿಳೆಯೊಬ್ಬಳು ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಮಗುವನ್ನೇ ಕೊಲೆಗೈದಿರುವ ಘಟನೆ
ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.

ದೇವಮ್ಮ ಚೆಟ್ಟಿಗೇರಿ ಆರೋಪಿಯಾಗಿದ್ದು, ಈಕೆ ಹಸುಗೂಸು ಸಂಗೀತಾ ಚೆಟ್ಟಿಗೇರಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಲೆಗೈದಿದ್ದಾಳೆ.

ಮೃತ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ದೇವಮ್ಮ, ತಾನು ಹಾಲುಣಿಸುತ್ತೇನೆ ಎಂದು ಕರೆದೊಯ್ದಿದ್ದಾಳೆ. ಹೀಗೆ ರೂಮಿಗೆ ಕರೆದೊಯ್ದು ಡೋರ್ ಹಾಕಿ ಹಾಲಿನ ಬಾಟ್ಲಿಯಲ್ಲಿ ವಿಷ ಬೆರೆಸಿ ಕೂಸಿಗೆ ಕೊಟ್ಟಿದ್ದಾಳೆ.

ವಿಷಬೆರೆತ ಹಾಲು ಕುಡಿದ ಸಂಗೀತಾ 3 ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಕಾರಣ:
ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಸಿದ್ದಪ್ಪ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ. ಆದರೆ ಮಕ್ಕಳಾಗದ ಹಿನ್ನೆಲೆ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ. ದೇವಮ್ಮಳನ್ನ ಮದುವೆಯಾದ್ಮೇಲೆ ಮೊದಲ ಪತ್ನಿ ಶ್ರೀದೇವಿ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿದ್ದಳು.

ಹಿರಿಯರ ರಾಜಿ ಸಂಧಾನದ ನಂತರ ಮೂರು ವರ್ಷಗಳ ಹಿಂದೆ ಬಬಲಾದ ಗ್ರಾಮದ ಗಂಡನ ಮನೆಗೆ ಶ್ರೀದೇವಿ ಮತ್ತೆ ಬಂದಿದ್ದಳು. ಕಳೆದ ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿತ್ತು. ಇತ್ತ ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿಯ ಐದು ತಿಂಗಳ ಮಗು ಸಂಗೀತಾಗೆ ಪಾಲು ಹೋಗುತ್ತೆ ಎಂದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.