ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭೇಟಿ ನೀಡಿದ್ದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ವಾರ್ಡ್ನ್ಗೆ ಹೊಡೆಯಿರಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗುತ್ತಿದೆ.
ಕಾನೂನು ಪದವಿಯ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿ ಹಾಸ್ಟೆಲ್ಗೆ ಭೇಟಿ ನೀಡಿದ್ದರು. ಈ ವೇಳೆ ವಾರ್ಡನ್ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳು ‘ಕೊಳೆತ ತರಕಾರಿ ಹಾಕಿದ ಉಪಹಾರ, ಊಟ ನೀಡುತ್ತಾರೆಂದು ಆರೋಪಿಸಿದ್ದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕ, ಇನ್ನೊಮ್ಮೆ ಈ ರೀತಿ ಕಳಪೆ ಊಟ, ಉಪಾಹಾರ ಕೊಟ್ಟರೆ ಅದನ್ನು ವಾರ್ಡ್ನ್ಗೆ ತಿನ್ನಿಸಿ. ಬಳಿಕ ರೂಮಲ್ಲಿ ಹಾಕಿ ಚೆನ್ನಾಗಿ ಹೊಡೆಯಿರಿ. ಏನಾದರೂ ಸಮಸ್ಯೆಯಾದರೆ ನಾನಿರುತ್ತೇನೆ ಯೋಚಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಪ್ರಚೋದಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.










