ಗಣರಾಜ್ಯೋತ್ಸವ ಹಿನ್ನೆಲೆ ನೃತ್ಯ ಮಾಡುವಾಗ ಕುಸಿದು ಬಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಸಾವು…

37
firstsuddi

ರಾಯಚೂರು: ಗಣರಾಜ್ಯೋತ್ಸವ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಕುಸಿದು ಬಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದ ನಿವಾಸಿ 38 ವರ್ಷ ವಯಸ್ಸಿನ ಮಹಾಂತೇಶ್ ಪೂಜಾರಿ ಮೃತ ವ್ಯಕ್ತಿ. 74ನೇ ಗಣರಾಜ್ಯೋತ್ಸವ ಹಿನ್ನೆಲೆ ಜಿಲ್ಲೆಯ ಸಿಂಧನೂರು ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಯೋಜಿಸಲಾಗಿತ್ತು. ಮಹಾಂತೇಶ್ ಕೋಲಾಟದಲ್ಲಿ ಭಾಗವಹಿಸಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಾಂತೇಶ್ ಕೊನೆಯುಸಿರೆಳೆದಿದ್ದಾರೆ.

ಹೃದಯಾಘಾತದಿಂದ ಮಹಾಂತೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಹಾಂತೇಶ್ ಅವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.