ಚಿಕ್ಕಮಗಳೂರು : ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಪಿಸಿಸಿ ರಾಜ್ಯಾದ್ಯಂತ ಆಯೋಜಿಸಿರುವ “ಆರೋಗ್ಯ ಹಸ್ತ” ಕಾರ್ಯಕ್ರಮದಡಿ ಕಾಂಗ್ರೇಸ್ ಕಾರ್ಯಕರ್ತರು ನಗರದ ಕೋಟೆ ಬಡಾವಣೆಯಲ್ಲಿ ಇಂದು ನಾಗರೀಕರ ಆರೋಗ್ಯ ತಪಾಸಣೆ ನಡೆಸಿದರು.
ಪಕ್ಷದ ಕೊರೋನಾ ಸೇನಾನಿ ಪ್ರಿಯದರ್ಶಿನಿ ಮಹಿಳಾ ಕಾಂಗ್ರೇಸ್ನ ತಾಲ್ಲೂಕು ಅಧ್ಯಕ್ಷೆ ಸರೋಜ ಬಸವರಾಜು ಅವರ ತಂಡ ಸುಗ್ಗಿಕಲ್ಲು ರಸ್ತೆ, ಕಣದಾಳು ರಸ್ತೆ, ಸುಬ್ಬನಾಯಕನ ಬೀದಿ ಹಾಗೂ ಚೆನ್ನಾಪುರ ರಸ್ತೆಯ ಮನೆಗಳಿಗೆ ತೆರಳಿ ಬೆಳಗಿನಿಂದ ಮಧ್ಯಾಹ್ನದವರಗೆ ನಾಗರೀಕರ ಆರೋಗ್ಯ ತಪಾಸಣೆ ನಡೆಸಿತು.
ಈ ವೇಳೆ ಮಾತನಾಡಿದ ಸರೋಜ ಬಸವರಾಜು ಪಕ್ಷದ ಜಿಲ್ಲಾ ಘಟಕದ ಸೂಚನೆಯಂತೆ ನಾಗರೀಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ತಪಾಸಣೆಗೊಳಗಾದವರಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ತಿಳಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ ಬಡಾವಣೆಯ ಎಲ್ಲಾ ಮನೆಗಳಿಗೂ ತೆರಳಿ ಆರೋಗ್ಯ ತಪಾಸಣೆ ನಡೆಸುವಂತೆ ವಾರಿಯರ್ಸ್ಗಳಿಗೆ ಸಲಹೆ ಮಾಡಿದರು.
50ಕ್ಕೂ ಹೆಚ್ಚು ಮನೆಗಳಲ್ಲಿ ತಪಾಸಣೆ ನಡೆಸಲಾಯಿತು, ಕಾಂಗ್ರೇಸ್ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವೀಶ್ ಕ್ಯಾತನಬೀಡು, ಕಾರ್ಯದರ್ಶಿ ಹಿರೇಮಗಳೂರು ಪುಟ್ಟಸ್ವಾಮಿ, ಯುವ ಕಾಂಗ್ರೇಸ್ ಜಿಲ್ಲಾ ಸಂಯೋಜಕ ಪ್ರತಾಪ್ ಸಿಂಹ, ಕಾರ್ಯದರ್ಶಿ ಹರ್ಷವರ್ಧನ್, ಮುಖಂಡರಾದ, ಆನಂದ್, ಯತಿರಾಜ ನಾಯ್ಡು, ಶಿವಕುಮಾರ್, ಬಸವರಾಜು, ಕುಮಾರ್ ಹೆಗ್ಗಡೆ ಹಾಜರಿದ್ದರು.










