ಚಿಕ್ಕಮಗಳೂರು : ಕೇರಳ, ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮದ್ ಖಾಲಿದ್ ಬಂಧಿತ ವ್ಯಕ್ತಿ ಎನ್ನಲಾಗಿದ್ದು, ಕಡೂರು ಮೂಲದವರು ಎಂದು ತಿಳಿದು ಬಂದಿದೆ. ಬಂಧಿತನಿಂದ ಪೊಲೀಸರು 23,80,000 ಮೌಲ್ಯದ ಚಿನ್ನಾಭರಣವನ್ನು ಹಾಗೂ 5ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಈ ಹಿಂದೆ ಹಲವೆಡೆ ಕಳ್ಳತನ ಮಾಡಿ ಮೈಸೂರಿನಲ್ಲಿ 9ವರ್ಷ ಜೈಲಿನಲ್ಲಿದ್ದ ಎನ್ನಲಾಗಿದ್ದು, ಆರು ತಿಂಗಳ ಹಿಂದೆ ಅಷ್ಟೇ ಆರೋಪಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದ ಬಳಿಕವೂ ಕಳ್ಳತನದಲ್ಲಿ ತೊಡಗಿಕೊಂಡಿದ್ದ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.










