ಜಾನಪದ ಕಲಾಭವನದ ನಿರ್ಮಾಣಕ್ಕೆ ತರೀಕೆರೆ ಪಟ್ಟಣದಲ್ಲಿ ನಿವೇಶನ ಒದಗಿಸುವಂತೆ ಒತ್ತಾಯ…

92
firstsuddi

ಚಿಕ್ಕಮಗಳೂರು: ಜಾನಪದ ಕಲಾಭವನದ ನಿರ್ಮಾಣಕ್ಕೆ ತರೀಕೆರೆ ಪಟ್ಟಣದಲ್ಲಿ ನಿವೇಶನ ಒದಗಿಸುವಂತೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರನ್ನು ಒತ್ತಾಯಿಸಿವೆ.

ನೂತನವಾಗಿ ಶಾಸಕರಾದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ತರೀಕೆರೆ ತಾಲೂಕಿನ ಬೆಟ್ಟದಹಳ್ಳಿಯಲ್ಲಿ ನಿನ್ನೆ ಸನ್ಮಾನಿಸಿ, ಅಭಿನಂದಿಸಿದ ಪರಿಷತ್ತಿನ ಪದಾಧಿಕಾರಿಗಳು, ತಾಲೂಕಿನಲ್ಲಿ ನಡೆಸಲಾಗುವ ಜಾನಪದ ಸಮ್ಮೇಳನಗಳಿಗೆ, ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

ಎಲೆಮರೆ ಕಾಯಿಯಂತೆ ಬದುಕುತ್ತಿರುವ ಗ್ರಾಮೀಣ ಪ್ರದೇಶಗಳ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಸನ ನೀಡಬೇಕು. ಮಾಸಾಸನದ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಹೇಳಿದರು.

ಜಾನಪದ ಕಲಾವಿದರಿಗೆ ಮಾಸಾಶನ ನೀಡಲು ನಿಗದಿಪಡಿಸಿರುವ ವಯೋಮಿತಿಯನ್ನು ಕಡಿಮೆ ಮಾಡಬೇಕು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಜಾನಪದ ಯುವಕಲಾವಿದರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ತರೀಕೆರೆ ತಾಲೂಕಿನಲ್ಲಿ ಜಾನಪದ ಕಲಾವಿದರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ವೇದಿಕೆ ಇಲ್ಲದಂತಾಗಿದೆ. ಹಾಗಾಗಿ ಜಾನಪದ ಕಲಾಭವನದ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ನಾಗೇಶ್,ಗೌರವಾಧ್ಯಕ್ಷ ದೇವರಾಜ್, ಕಾರ್ಯದರ್ಶಿ ವಿಶ್ವನಾಥಾಚಾರ್, ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ನಾಗೇಂದ್ರಪ್ಪ, ಬಸವರಾಜಯ್ಯ, ವೈ.ಟಿ. ಸುರೇಶ್, ಕಲಾವಿದರಾದ ಮೋಹನ್‍ಕುಮಾರ್, ದೇವರಾಜು, ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಶ್ ಹಾಜರಿದ್ದರು.