ಚಿತ್ರದುರ್ಗ : ಡಿ.ಕೆ. ಶಿವಕುಮಾರ್ ಅವರು ನಿನ್ನೆ ಇಡಿ ಕಚೇರಿಯಲ್ಲಿ ಕಣ್ಣೀರಿಟ್ಟ ವಿಷಯಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿ.ಕೆ ಶಿವಕುಮಾರ್ ಅವರ ವೈಯಕ್ತಿಕ ವಿಚಾರದ ಬಗ್ಗೆ ಎಂದಿಗೂ ಹೇಳಿಕೆ ನೀಡಿಲ್ಲ. ಅವರು ಹೇಗೆ ನನ್ನನ್ನು ಕೆಣಕಿ ರಾಜಾಕೀಯವಾಗಿ ಟೀಕೆ ಮಾಡುತ್ತಿದ್ದರೋ, ಹಾಗೆಯೇ ನಾನು ಕೂಡಾ ರಾಜಾಕೀಯ ವಿಚಾರಕ್ಕೆ ಅವರ ವಿರುದ್ಧ ಹೇಳಿಕೆ ನೀಡಿದ್ದೇನೆ. ಒಬ್ಬ ಮನುಷ್ಯ ಕಷ್ಟದಲ್ಲಿ ಇದ್ದಾಗ ಅವರನ್ನು ಟೀಕಿಸುವ ವ್ಯಕ್ತಿತ್ವ ನನ್ನದಲ್ಲ. ನಾನು ಕೆಟ್ಟ ಮನಸ್ಸಿನಿಂದ ಯಾವುದೇ ಹೇಳಿಕೆ ನೀಡಿಲ್ಲ. ಡಿಕೆಶಿ ಅವರೇ ನನ್ನ ಮಾತಿನಿಂದ ನಿಮಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.










