ದಕ್ಷಿಣ ಕನ್ನಡ: ತಾಳಿ ಕಟ್ಟಿದ ನಂತರ ವರನೊಬ್ಬ ಅನಾರೋಗ್ಯ ಕಾರಣ ಕೊಟ್ಟು ಪರಾರಿಯಾದ ಘಟನೆ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ.
ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯಬೇಕಿತ್ತು. ಅಂತೆಯೇ ಯುವತಿ ಕರ್ನಾಟಕದ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್ ಗೆ ಬಂದಿದ್ದಾರೆ. ಆದರೆ ವರ ತಾಳಿ ಕಟ್ಟಿದ ಬಳಿಕ ಭಾರೀ ಹೈಡ್ರಾಮಾ ನಡೆಸಿದ್ದಾನೆ.
ನಡೆದಿದ್ದೇನು..?: ಕಲ್ಯಾಣ ಮಂಟಪದಲ್ಲಿ ಅಕ್ಷಯ್ ಮಂಗಳೂರು ಮೂಲದ ಯುವತಿ ಜೊತೆ ಮದುವೆಯಾಗುತ್ತಿರುವ ವಿಚಾರ ಮಾಜಿ ಪ್ರೇಯಸಿ ಗಮನಕ್ಕೆ ಬಂದಿದೆ. ಹೀಗಾಗಿ ಮಾಜಿ ಪ್ರೇಯಸಿ ಕಲ್ಯಾಣಮಂಟಪಕ್ಕೆ ಬಂದು ಕ್ಯಾತೆ ತೆಗೆದಿದ್ದಾಳೆ. ಈ ಹಿನ್ನೆಲೆಯಲ್ಲಿ ವರ, ಅನಾರೋಗ್ಯ ಕಾರಣ ಮುಂದಿಟ್ಟಿದ್ದಾನೆ. ಮದುವೆಗೆ ಬಂದಿದ್ದ ಸಂಬಂಧಿಕರಿಗೆ ಕಿಡ್ನಿಯಲ್ಲಿ ಕಲ್ಲುಂಟಾಗಿ ಆಸ್ಪತ್ರೆಗೆ ದಾಖಲು ಆಗುತ್ತೇವೆ ಅಂತ ಹೇಳಿದ್ದಾನೆ. ಅಲ್ಲದೇ ಸಂಬಂಧಿಕರೇ ವರನನ್ನು ಕಲ್ಯಾಣ ಮಂಟಪದಿಂದ ಕರೆದುಕೊಂಡು ಹೋಗಿದ್ದಾರೆ.
ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಗೆ ಶಾದಿ ಡಾಟ್ ಕಾಮ್ ಮೂಲಕ ಅಕ್ಷಯ್ ಪರಿಚಯವಾಗಿದೆ. ಈ ಪರಿಚಯವು ಪ್ರೀತಿಗೆ ತಿರುಗಿ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಯುವತಿಯು ಕೇರಳದ ಪೊಲೀಸ್ ಠಾಣೆಯಲ್ಲಿ ಡಿ.26ಕ್ಕೆ ಅತ್ಯಾಚಾರ ದೂರು ದಾಖಲಿಸಿದ್ದರು. ಆರೋಪಿ ಅಕ್ಷಯ್ ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.










