ಬ್ಯಾಂಕಾಕ್ : ಥೈಲ್ಯಾಂಡ್ನಲ್ಲಿ ಸಂಭವಿಸಿದ ರಸ್ತೆ ಅಪಘಾದಲ್ಲಿ ಮಧ್ಯಪ್ರದೇಶ ಮೂಲದ ಯುವತಿ ಮೃತಪಟ್ಟಿದ್ದು, ಯುವತಿಯ ಮೃತದೇಹವನ್ನು ಭಾರತಕ್ಕೆ ತರಲು ಪೋಷಕರು ಪರದಾಡುವಂತಾಗಿದೆ. ಪ್ರಗ್ಯಾ ಪಲಿವಾಲ್ ಮೃತಪಟ್ಟ ಯುವತಿ ಎನ್ನಲಾಗಿದ್ದು, ಪ್ರಗ್ಯಾ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಂಕಾಂಗ್ ಮೂಲದ ಸಂಸ್ಥೆಯೊಂದು ಆಯೋಜಿಸಿದ್ದ ಸೆಮಿನಾರ್ನಲ್ಲಿ ಭಾಗವಹಿಸಲು ಥೈಲ್ಯಾಂಡ್ನ ಫಕೆಟ್ ಪ್ರದೇಶಕ್ಕೆ ತೆರಳಿದ್ದರು. ಆದರೆ ಸೆಮಿನರ್ ಆರಂಭವಾಗುವ ಮೊದಲೇ ಪ್ರಗ್ಯಾ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ತಿಳಿದ ಪೋಷಕರು ತಮ್ಮ ಬಳಿ ಪಾಸ್ಪೋರ್ಟ್ ಇಲ್ಲದ ಕಾರಣ ಸ್ಥಳೀಯ ಶಾಸಕರಾದ ಅಲೋಕ್ ಚತುರ್ವೇದಿ ಅವರನ್ನು ಭೇಟಿ ಮಾಡಿ ಮಾಹಿತಿಯನ್ನು ತಿಳಿಸಿದ್ದು, ಕೂಡಲೇ ಶಾಸಕರು ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಅವರಿಗೆ ತಿಳಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದು, ಯುವತಿಯ ಮೃತದೇಹವನ್ನು ತರಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.










