ದಸರಾ ಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ…

73
firstsuddi

ಶಿವಮೊಗ್ಗ: ದಸರಾ ಜಂಬೂ ಸವಾರಿಗೆ ಬಂದಿದ್ದ ಸಕ್ರೆಬೈಲಿನ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.

ನಿನ್ನೆ ರಾತ್ರಿ ನಗರದ ವಾಸವಿ ಶಾಲೆ ಆವರಣದಲ್ಲಿ ನೇತ್ರಾವತಿ ಆನೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಎರಡು ಆರೋಗ್ಯವಾಗಿವೆ.

ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಸಾಗರ್, ಹೇಮಾವತಿ ಹಾಗೂ ನೇತ್ರಾವತಿ ಆನೆಗಳನ್ನು ಕರೆತರಲಾಗಿತ್ತು. ಮೈಸೂರು ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆ ಸಂದರ್ಭ ನೇತ್ರಾವತಿ ಆನೆಯ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಲಾಗಿತ್ತು. ಆಗ ನೇತ್ರಾವತಿ ಗರ್ಭವತಿ ಎನ್ನುವುದು ಗೊತ್ತಾಗಿರಲಿಲ್ಲ. ಅಲ್ಲದೇ ಶಿವಮೊಗ್ಗ ದಸರಾ ಹಿನ್ನೆಲೆಯಲ್ಲಿ ನೇತ್ರಾವತಿಯನ್ನು ಮೈಸೂರಿಗೆ ಕಳುಹಿಸಿರಲಿಲ್ಲ.

ಕಳೆದ 3 ದಿನದ ಹಿಂದೆ ಆನೆಗಳನ್ನು ಶಿವಮೊಗ್ಗಕ್ಕೆ ಕರೆ ತರಲಾಗಿತ್ತು. ಜಂಬೂ ಸವಾರಿಯ ತಾಲೀಮು ಸಹ ನಡೆಸಲಾಗಿತ್ತು. ತಾಲೀಮು ಮುಗಿಸಿಕೊಂಡು ಬಂದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು, ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರಿಗೆ ಜನ್ಮ ನೀಡಿದ ನೇತ್ರಾವತಿ ಆನೆ ಹಾಗೂ ಮರಿಯನ್ನು ಸಕ್ರೆಬೈಲು ಬಿಡಾರಕ್ಕೆ ಕರೆದೊಯ್ಯಲಾಗಿದೆ. ಗರ್ಭವತಿಯಾಗಿದ್ದ ಆನೆಯನ್ನು ದಸರಾ ಜಂಬೂ ಸವಾರಿ ತಾಲೀಮಿನಲ್ಲಿ ಬಳಸಿದ್ದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.