ದೇವಾಲಯಗಳು ಜನರ ಮೌಡ್ಯಗಳನ್ನು ಕಳೆಯುವ ಕೆಲಸ ಮಾಡಬೇಕು: ಶ್ರೀ ಮುರುಗೇಂದ್ರ ಸ್ವಾಮೀಜಿ.

74
firstsuddi

ಚಿಕ್ಕಮಗಳೂರು: ದೇವಾಲಯಗಳು ಜನರ ಮೌಡ್ಯಗಳನ್ನು ಕಳೆಯುವ ಕೆಲಸ ಮಾಡಬೇಕು ಎಂದು ಫಲಹಾರ ಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ಮುಗುಳುವಳ್ಳಿಯಲ್ಲಿ ಗ್ರಾಮದೇವತೆ ಕರಿಯಮ್ಮ ಮತ್ತು ಬಾಗಿಲಮ್ಮನವರ ನೂತನ ದೇವಾಲಯಗಳ ಲೋಕಾರ್ಪಣೆ, ಕಳಸಾರೋಹಣದ ಅಂಗವಾಗಿ ಇಂದು ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇವಾಲಯಗಳು ಮಾನಸಿಕ ಶಾಂತಿ ನೆಮ್ಮದಿ ನೀಡುವ ತಾಣಗಳು ಅಲ್ಲಿ ಯಾರಿಗೂ ನಿರ್ಬಂಧವಿರಬಾರದು. ದೇವಾಲಯಗಳು ಬರೀ ಪೂಜೆ ಪುನಸ್ಕಾರ ಹೋಮ ಹವನಗಳಿಗೆ ಮಾತ್ರ ಸೀಮಿತವಾಗದೆ ಭಕ್ತರಿಗೆ ಸಮಾಧಾನ ಸಾಂತ್ವನ ಹೇಳುವ ಜ್ಞಾನ ಪ್ರಸಾರದ ಕೇಂದ್ರಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಜಗತ್ತಿನಲ್ಲಿ ಎಲ್ಲರೂ ಶ್ರೇಷ್ಠರು ಇಲ್ಲಿಯಾರೂ ಮೇಲಲ್ಲ ಯಾರೂ ಕೀಳಲ್ಲ ಇದನ್ನು ಎಲ್ಲ ಜನರು ಅರಿಯಬೇಕು ಸಾಮರಸ್ಯದಿಂದ ಬದುಕುವ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೇವಾಲಯಗಳನ್ನು ಶುದ್ಧವಾಗಿ ಮತ್ತು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅದರ ಸದುಪಯೋಗವಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಕೆಳ ವರ್ಗದ ಜನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಅವರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಎಂ.ಡಿ ಉಮೇಶ್ ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದವರಿಗೆ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭಕ್ಕೆ ಮುನ್ನ ಫಲಹಾರ ಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ ದೇವಾಲಯಗಳ ಕಳಸಾರೋಹಣವನ್ನು ನೆರವೇರಿಸಿದರು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಬಿ ಮಲ್ಲಪ್ಪ ಎಂಎಸ್ ನಿರಂಜನ್, ಪುಷ್ಪಾ ಸೋಮಶೇಖರ್, ಎನ್. ರಘುನಂದನ್, ಎಂಡಿ ರವಿ ರತ್ನಮ್ಮ ಮುಳ್ಳಯ್ಯ, ಎಂ ರುದ್ರಪ್ಪ, ಎಂ.ಎಸ್ ಧರ್ಮಪಾಲ್ ಶ್ರುತಿ ಉಮೇಶ್, ಗ್ರಾಪಂ ಅಧ್ಯಕ್ಷ ಭಾಗ್ಯ ನಾಗರಾಜ್, ಎಂ ಎಂ ವಿಶ್ವನಾಥ್ ಸದಾಶಿವ ಶಾಸ್ತ್ರಿ ಉಪಸ್ಥಿತರಿದ್ದರು.