ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಬಂದಿದ್ದರೂ ರಾಜ್ಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಬಜೆಟ್ನಲ್ಲಿ ರಾಜ್ಯಕ್ಕೆ ನಿರಾಸೆ ಮೂಡಿಸಿದ್ದಾರೆ. ಅವರನ್ನು ಕಳುಹಿಸಿದ ನಮಗೆ ನಾಚಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಜಿ.ಸಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ಕೇಂದ್ರ ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಬಗ್ಗೆ ಏನು ಹೇಳೋದು ಗೊತ್ತಾಗುತ್ತಿಲ್ಲ. ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಹೇಳೋಕೆ ಏನೂ ಉಳಿದಿಲ್ಲ. ಕಳೆದ ಕೆಲವು ವರ್ಷದಲ್ಲೇ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಕಳೆದ ಬಾರಿ ಆಂಧ್ರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಕಳೆದ ಬಾರಿ ಆಂಧ್ರದ ಬಜೆಟ್ ಈ ಬಾರಿ ಬಿಹಾರದ ಬಜೆಟ್. ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬಿಹಾರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪಾಲಿನ ತೆರಿಗೆ ನಮಗೆ ಕೊಡುತ್ತಿಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ಮಾಡಬೇಕಾಗುತ್ತೆ ಎಂಬ ಎಚ್ಚರಿಕೆ ಕೊಡುತ್ತೇವೆ. ಇಷ್ಟೊಂದು ಬಿಜೆಪಿ ಸಂಸದರು ಇದ್ದಾರೆ. ಆದರೆ ಕರ್ನಾಟಕಕ್ಕೆ ಯಾವುದೇ ಯೋಜನೆ ನೀಡಿಲ್ಲ. ಕೇಂದ್ರ ಸರ್ಕಾರದಿಂದ ಮೋಸ ಆಗಿದೆ. ಬೆಂಗಳೂರು ಸಿ.ಟಿ ಟ್ರಾಫಿಕ್ಗೆ ಮುಕ್ತಿ ನೀಡಲು ಯಾವುದೇ ಯೋಜನೆ ರೂಪಿಸಿಲ್ಲ. ನಾವು ಕೊಟ್ಟಂತಹ ಮನವಿಯನ್ನು ಪರಿಗಣಿಸಿಲ್ಲ. ಬೆಂಗಳೂರಿಗೆ ಮತ್ತೊಂದು ಏರ್ಪೋರ್ಟ್ ಅಗತ್ಯವಿದೆ. ಇದರ ಬಗ್ಗೆಯೂ ಏನ್ನೂ ಹೇಳಿಲ್ಲ. ಇದೊಂದು ದುರ್ದೈವದ ಸಂಗತಿ. ರಾಜ್ಯದ ಸಚಿವರು ಕೆಲಸ ಮರೆತಿದ್ದಾರೆ. ಕನ್ನಡದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.










