ಬೆoಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಉತ್ತರಿಸುವುದಿಲ್ಲ. ಅಲ್ಲದೆ, ಒಬ್ಬ ಪೇಟೆ ರೌಡಿ ತರ ಮಾತಾಡೋದಾದರೆ ನನ್ನ ಪ್ರತಿಕ್ರಿಯೆಗೆ ಅವರು ಅರ್ಹರಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಿನ ಜನ ಸಮಸ್ಯೆಗಳನ್ನು ಬಂದು ನಮಗೂ ಹೇಳುತ್ತಾರೆ. ನಾನು ಬರೀ ಮಂಡ್ಯದ ಸಂಸದೆ ಅಲ್ಲ. ಬದಲಿಗೆ ನಾನು ಮೈಸೂರಿನ ಒಂದು ಭಾಗದ ಸಂಸದೆಯೂ ಕೂಡಾ ಹೌದು ಎಂದು ಹೇಳಿದರು.
ಅಲ್ಲದೆ ಕೆ.ಆರ್. ನಗರ ನನ್ನ ಕ್ಷೇತ್ರಕ್ಕೆ ಸೇರುತ್ತದೆ. ರಾಜಕಾರಣಿಗಳು ಹೋದಾಗ ಜನ ಬಂದು ಹೇಳುವುದು ಸಾಮಾನ್ಯ, ಹಾಗಾಗಿ ಈ ರೀತಿಯ ಮಾತುಗಳು ತುಂಬಾ ಬೇಜವಾಬ್ದಾರಿತನವನ್ನು ತೋರಿಸುತ್ತವೆ. ಎರಡು ಬಾರಿ ಸಂಸದರಾದವರು ಅದನ್ನು ಅರಿತು ನಡೆದುಕೊಳ್ಳಬೇಕು. ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.










