ತುಮಕೂರು : ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ದೇಶದಲ್ಲಿ ಒಂದು ಒಳ್ಳೆಯ ಹೆಸರಿದೆ ಎಂದು ಜೆಡಿಎಸ್ ಶಾಸಕ ಗೌರಿಶಂಕರ್ ಅವರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ ಮೋದಿ ಅವರ ಬಗ್ಗೆ ಈ ದೇಶದಲ್ಲಿ ಒಳ್ಳೆಯ ಹೆಸರಿದೆ. ದೇಶವನ್ನು ಅಭಿವೃದ್ದಿ ಮಾಡುವ ಕಾರ್ಯಸೂಚಿಯನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ದೇಶದ ಬಗೆಗಿನ ಅವರ ದೃಷ್ಟಿಕೋನ ಒಳ್ಳೆಯದಿದೆ” ಎಂದು ಹೊಗಳಿದ್ದು, ಅಲ್ಲದೇ ಬಿಜೆಪಿಯ ಕೆಲವು ನಾಯಕರಿಂದ ಆ ಪಕ್ಷಕ್ಕೆ ಹಾನಿಯಾಗುತ್ತಿದೆ. ಮಾಜಿ ಶಾಸಕ ಸುರೇಶ್ ಗೌಡ ಅಂತಹವರಿಂದ ಬಿಜೆಪಿಗೆ ಕೆಟ್ಟ ಹೆಸರು ಬರುತ್ತಿದೆ. ತುಮಕೂರು ಕ್ಷೇತ್ರದ ರಸ್ತೆ ಕಾಮಗಾರಿಗೆ ಬಿಡುಗಡೆಯಾದ ಹಣವನ್ನು ತಡೆ ಹಿಡಿಯುವಂತೆ ಸುರೇಶ್ ಗೌಡ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇವರು ಸಲ್ಲಿಸಿದ ಪತ್ರಕ್ಕೆ ಮನ್ನಣೆ ನೀಡಿ ಹಣವನ್ನು ತಡೆ ಹಿಡಿಯಲಾಗಿದೆ. ಸುರೇಶ್ ಗೌಡ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಇಂತಹವರಿಂದ ಬಿಜೆಪಿ ಪಕ್ಷಕ್ಕೆ ಹಾನಿಯಾಗುತ್ತಿದೆ. ಈ ವಿಚಾರವಾಗಿ ನಾನು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ರಾಜ್ಯಪಾಲರಿಗೂ ಟ್ವೀಟ್ ಮಾಡಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.










