ಬಣಕಲ್ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳಿಂದ ಮುಖ್ಯ ಶಿಕ್ಷಕ ಪಿ.ವಾಸುದೇವ್ ಭಟ್  ಅವರಿಗೆ ಸನ್ಮಾನ   

13

  ಕೊಟ್ಟಿಗೆಹಾರ: ಶಿಕ್ಷಕರ ಸೇವೆ ಪವಿತ್ರ ಕಾರ್ಯವಾಗಿದೆ.ಶಿಕ್ಷಕ ವೃತ್ತಿಗೆ ಎಂದೂ ನಿವೃತ್ತಿ ಇಲ್ಲ ಎಂದು ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ವಾಸುದೇವ್ ಭಟ್ ಹೇಳಿದ ಅವರು ಬಣಕಲ್ ಪ್ರೌಢಶಾಲೆಯಲ್ಲಿ 1989-90 ಬ್ಯಾಚಿನ ಎಸ್ ಎಸ್ ಎಲ್ ಸಿ ಹಳೇ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.’ಸುಮಾರು 12ಸಾವಿರ ಮಕ್ಕಳಿಗೆ ವಿದ್ಯೆಯನ್ನು ಕಲಿಸಿದ್ದು ಅವರು ವಿವಿಧ ವೃತ್ತಿ, ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನನಗೆ ಸರ್ಕಾರದಿಂದ ಶಿಕ್ಷಕ ವೃತ್ತಿಗೆ ನಿವೃತ್ತಿ ಸಿಗಬಹುದು.ಆದರೆ ಶಿಕ್ಷಕ ವೃತ್ತಿ ಜೀವನಕ್ಕೆ ಎಂದೂ ನಿವೃತ್ತಿಯಿಲ್ಲ. ಯಾವ ವಿದ್ಯಾರ್ಥಿಗಳು ಶಿಕ್ಷಣ ನೀಡುವ ಬಗ್ಗೆ ಬಳಿ ಬಂದರೆ ಅವರಿಗೆ ಕಲಿತ ವಿದ್ಯೆಯನ್ನು ದಾನ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಪ್ರಯತ್ನಿಸುತ್ತೇನೆ.35 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ನೆನಪಿಟ್ಟುಕೊಂಡು ನನ್ನನ್ನು ಸನ್ಮಾನಿಸಿದ್ದಕ್ಕೆ ನಾನು ಋಣಿಯಾಗಿದ್ದೇನೆ.ಕಲಿತ ಶಾಲೆ ಶಿಕ್ಷಕರನ್ನು ಮರೆಯದಿರುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣವಾಗಿದೆ.ಈ ಸಂಸ್ಥೆಯಲ್ಲಿ ಕಲಿಕೆಗೆ ಪ್ರೋತ್ಸಾಹ, ಉತ್ತಮ ಸಾಮಾಗ್ರಿ, ಉತ್ತಮ ಶಿಕ್ಷಣ ಕೊಡುವ ಶಿಕ್ಷಕರಿದ್ದಾರೆ. ಮುಂದೆಯೂ ಈ ಶಾಲೆಗೆ ಸಲಹೆ ಸಹಕಾರ ನೀಡಿ’ಎಂದರು. ಬೆಳ್ತಂಗಡಿ ತಾಲ್ಲೂಕಿನ ಕರಾಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಬಿ.ಬಸವಲಿಂಗಪ್ಪ ಮಾತನಾಡಿ’ ಈ ಶಾಲೆಯಲ್ಲಿ ಕಲಿತು ಶಿಕ್ಷಕರಾಗಿ ಸೇವೆ ನೀಡುತ್ತಿದ್ದೇನೆ ಎಂದರೆ ಅದು ಬಣಕಲ್ ಪ್ರೌಢಶಾಲೆಯ ಶಿಕ್ಷಕರ ಶಿಕ್ಷಣದ ಕಾರ್ಯವೈಖರಿಯಾಗಿದೆ.ಶಿಕ್ಷಣದೊಂದಿಗೆ ಉತ್ತಮ ನಡೆ ಸಂಸ್ಕಾರವನ್ನು ಕಲಿಸಿಕೊಟ್ಟಿದ್ದಾರೆ.ಈ ಶಾಲೆಯ ಹಲವು ಮಕ್ಕಳು ವಿದೇಶಗಳಲ್ಲೂ ದುಡಿಯುತ್ತಿದ್ದು, ಬಣಕಲ್ ಪ್ರೌಢಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.ಶಾಲೆಯ ಹಲವು ಶಿಕ್ಷಕರು ಮೃತರಾಗಿದ್ದರೂ ಅವರ ಸೇವೆಯ ನೆನಪು ಸದಾ ಸ್ಮರಿಸುತ್ತೇವೆ’ ಎಂದರು.         ಮುಖ್ಯ ಶಿಕ್ಷಕರಾದ ಪಿ.ವಾಸುದೇವ್ ಭಟ್ ಹಾಗೂ ಪತ್ನಿ ವಿಜಯಲಕ್ಷ್ಮಿ ದಂಪತಿಗಳನ್ನು ಹಳೇ ವಿದ್ಯಾರ್ಥಿಗಳು ಶಾಲು ಹೊದಿಸಿ, ಸ್ಮರಣಿಕೆ  ನೀಡಿ ಸನ್ಮಾನಿಸಿದರು  ಸೈಯದ್ ನವೀದ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು.ಹಳೇ ವಿದ್ಯಾರ್ಥಿಗಳಾದ ಸುವರ್ಣಲತ,ವಸಂತ ಪೂಜಾರಿ, ವಿಜಯಕುಮಾರ್,ಕೆ.ಎಲ್.ರಘು,ಬಿ.ಎಸ್.ಕಲ್ಲೇಶ್, ಕೆ.ಈ. ಉಮೇಶ್, ಸಂತೋಷ್,ಸೈಯದ್ ನವೀದ್, ಟಿ.ಬಿ.ಬಸವಲಿಂಗಪ್ಪ, ಆಲ್ವಿನ್ ಥಾಮಸ್, ಎಸ್.ಎನ್.ರವಿ, ರಿಯಾಜ್ಜುದ್ದೀನ್, ಅನಿಲ್ ಮೊಂತೆರೊ, ಪ್ರಥಮ ದರ್ಜೆ ಸಹಾಯಕಿ ಭವ್ಯ  ಇದ್ದರು.