ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜ್​ಕುಮಾರ್ ಜೀವನದ ವಿವರ…

53
firstsuddi

ಪುನೀತ್ ರಾಜ್​ಕುಮಾರ್ ಅವರ ಜೀವನ ಕುರಿತ ವಿಷಯವನ್ನು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಇದೀಗ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ.

ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ’ ಕೃತಿಯ ಒಂದು ಅಧ್ಯಾಯವಾದ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಂಡಿದೆ ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದು, ಡಾ.ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.

ಇತ್ತೀಚೆಗಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಬಿಡುಗಡೆ ಮಾಡಿದ್ದರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಎನ್ನುವ ದಾಖಲೆಗೂ ಈ ಪುಸ್ತಕ ಪಾತ್ರವಾಗಿತ್ತು.