ಬೆಳಗಾವಿ : ಕುಂದಾನಗರಿಯಲ್ಲಿ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಗರದ ಚಿತ್ರಮಂದಿರದಲ್ಲಿ ಪಠಾಣ್ ಚಿತ್ರ ಪ್ರದರ್ಶನ ಮಾಡದಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಪಠಾಣ್ ಚಿತ್ರದ ಬ್ಯಾನರ್ ಹರಿದು ಆಕ್ರೋಶ ಹೊರಹಾಕಿದರು.
ನಗರದ ಸ್ವರೂಪ ಚಿತ್ರಮಂದಿರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದು, ಸ್ವರೂಪ ಚಿತ್ರಮಂದಿರ ಬಳಿ ಹಾಕಿದ್ದ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಲವು ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ಪೋಸ್ಟರ್ ಹರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಬೆಳಗಾವಿಯ ಸ್ವರೂಪ ಚಿತ್ರಮಂದಿರ ಬಳಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿತ್ರಮಂದಿರದ ಎದುರು ಬಿಗಿ ಭದ್ರತೆ ಒದಗಿಸಲಾಗಿದೆ. ಓರ್ವ ಸಿಪಿಐ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಚಿತ್ರಮಂದಿರ ಬಳಿ ಒಂದು ಕೆಎಸ್ಆರ್ಪಿ ತುಕಡಿ ಇರಿಸಲಾಗಿದೆ.










