ನವದೆಹಲಿ : ಇಂದು ದೆಹಲಿ, ಪಂಜಾಬ್ ಮತ್ತು ಹೈದರಾಬಾದ್ ನ 35 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ.
ದೆಹಲಿ ಸರ್ಕಾರ ಹಿಂಪಡೆದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ. ಈ ಮೂರು ರಾಜ್ಯಗಳಲ್ಲಿನ ಲಿಕ್ಕರ್ ಕಂಪೆನಿಗಳು, ವಿತರಕರು ಮತ್ತು ಪೂರೈಕೆದಾರ ವ್ಯವಸ್ಥೆಗಳಿಗೆ ಸೇರಿದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಇಡಿ ದಾಳಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ದಾಳಿ ‘ಕೊಳಕು ರಾಜಕಾರಣ’ ಎಂದು ಕಿಡಿಕಾರಿದ್ದಾರೆ.
ಮೂರು ತಿಂಗಳಿನಿಂದ 500ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ. 300ಕ್ಕೂ ಹೆಚ್ಚು ಸಿಬಿಐ/ ಇಡಿ ಅಧಿಕಾರಿಗಳು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಮನೀಶ್ ಸಿಸೋಡಿಯಾ ಅವರ ವಿರುದ್ಧ ಪುರಾವೆಗಳನ್ನು ಹುಡುಕಲು ಇಷ್ಟೆಲ್ಲ ಮಾಡಲಾಗುತ್ತಿದೆ. ಆದರೆ ಅವರಿಗೆ ಏನನ್ನೂ ಹುಡುಕುವುದು ಸಾಧ್ಯವಾಗಿಲ್ಲ. ಏಕೆಂದರೆ ಅಲ್ಲಿ ಏನೂ ನಡೆದಿಲ್ಲ. ಅವರ ಕೊಳಕು ರಾಜಕೀಯದಿಂದಾಗಿ ಅನೇಕ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ. ಇಂತಹ ದೇಶ ಹೇಗೆ ಪ್ರಗತಿ ಸಾಧಿಸಲು ಸಾಧ್ಯ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.










