ಬ್ಯಾನರ್ ನಲ್ಲಿ ಫೋಟೋ ಹಾಕದ ವಿಚಾರ- ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೇ ಬಡಿದಾಡಿಕೊಂಡ ಕಾರ್ಯಕರ್ತರು…

47
firstsuddi

ಕೋಲಾರ: ಬ್ಯಾನರ್ ನಲ್ಲಿ ತಮ್ಮ ನಾಯಕರ ಫೋಟೋ ಹಾಕದೆ ತಾರತಮ್ಯ ಮಾಡಿದ್ದಾರೆಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ ನಡೆದಿದ್ದು, ಎರಡು ಗುಂಪಿನ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ.

ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಮತ್ತು ಕೆ.ಎಚ್.ಮುನಿಯಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ಇಂದು ಕಾಂಗ್ರೆಸ್ ಕಚೇರಿಯಲ್ಲಿ ಬೂತ್ ಮಟ್ಟದ ಏಜೆಂಟರ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ರಮೇಶ್ ಕುಮಾರ್ , ಕೊತ್ತೂರು ಮಂಜುನಾಥ್, ನಸೀರ್ ಅಹ್ಮದ್ ಫೋಟೋ ಇಲ್ಲದ್ದನ್ನು ಕಂಡು ಅವರ ಅಭಿಮಾನಿ ಕಾರ್ಯಕರ್ತರು ಆಕ್ಷೇಪ ತೆಗೆದು ಜೋರು ಗಲಾಟೆ ಮಾಡಲಾರಂಭಿಸಿದರು.

ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಮತ್ತು ಸಚಿವ ಕೆ.ಹೆಚ್.ಮುನಿಯಪ್ಪ ಬೆಂಬಲಿಗರ ನಡುವೆ ಮಾರಾಮಾರಿಯಾಗಿದೆ. ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಸಮ್ಮುಖದಲ್ಲಿ ಎರಡು ಗುಂಪುಗಳ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಸಭೆಯಿಂದ ಮುನಿಯಪ್ಪ ಬೆಂಬಲಿಗ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ ಹೊರ ನಡೆದಿದ್ದಾರೆ.