ಮಕ್ಕಳ ಶಿಕ್ಷಣ ಸಾಧನೆ, ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರಿಗಿಂತ ಪೋಷಕರ ಪಾತ್ರ ಬಹಳ ಮುಖ್ಯ: ಮಾಜಿ ಸಚಿವೆ ಮೋಟಮ್ಮ.

61
firstsuddi

ಚಿಕ್ಕಮಗಳೂರು: ಮಕ್ಕಳ ಶಿಕ್ಷಣ ಸಾಧನೆ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರಿಗಿಂತ ಪೋಷಕರ ಪಾತ್ರ ಬಹಳ ಮುಖ್ಯ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಹೆತ್ತವರ ಪಾತ್ರ ಮತ್ತು ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ನಡೆಯನ್ನು ನಿರಂತರವಾಗಿ ಗಮನಿಸಿ, ಅವರನ್ನು ತಿದ್ದಿತೀಡಿಗುರಿ ಮುಟ್ಟಿಸುವ ಹೊಣೆಗಾರಿಕೆಯೂ ಅವರ ಮೇಲಿರುತ್ತದೆ ಎಂದರು.

ಪೋಷಕರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಮಾತ್ರ ಮಕ್ಕಳು ಉತ್ತಮ ನಾಗರೀಕರಾಗುತ್ತಾರೆ. ಸಾಧನೆ ಮಾಡುತ್ತಾರೆ, ಅದಕ್ಕಾಗಿಯೇ ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂದು ಹೇಳಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಆಸೆ ಮತ್ತು ನಿರೀಕ್ಷೆಗಳನ್ನು ಹೆತ್ತವರು ತಕ್ಷಣ ಈಡೇರಿಸುವುದರಿಂದ ಮಕ್ಕಳಿಗೆ ಕಷ್ಟಗಳನ್ನು ಎದುರಿಸುವುದು ಮತ್ತು ತಾಳ್ಮೆ ಬರುವುದಿಲ್ಲ. ಬದುಕನ್ನು ಎದುರಿಸುವುದರಲ್ಲಿ ಅವರು ವಿಫಲರಾಗುತ್ತಾರೆ ಮಕ್ಕಳ ಹಾದಿಯನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸದಿದ್ದರೆ ಮಕ್ಕಳು ಹಾದಿತಪ್ಪಿ, ಸಂತೋಷ ತರುವುದರ ಬದಲು ದುಃಖದ ಮೂಲವಾಗುತ್ತಾರೆ ಎಂದು ಎಚ್ಚರಿಸಿದರು.

ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ಮಾತನಾಡಿ, ಶಿಕ್ಷಕರೂ ಸಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವದರ ಜೊತೆಗೆ ಅವರನ್ನು ತಿದ್ದಿತೀಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ಮಾಡಿದರು.

ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರಲ್ಲಿ ಸಂಸ್ಕಾರವನ್ನು ಬೆಳೆಸುವ ಕೆಲಸವನ್ನೂ ಕುವೆಂಪು ವಿದ್ಯಾ ನಿಕೇತನ ಮಾಡುತ್ತಿದೆ ಎಂದರು.

ಸಂಸ್ಥೆಯ ಟ್ರಸ್ಟಿ ಅರ್ಚನಾ ಶಂಕರ್, ಮುಖ್ಯಸ್ತೆ ಹೊನ್ನಾಂಬಿಕೆ ಉಪಸ್ಥಿತರಿದ್ದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.