ಮಣಿಪಾಲ: ಚಲಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಉಡುಪಿಯ ಮಣಿಪಾಲದ ಬಳಿ ನಡೆದಿದೆ. ವಾಹನವು ಬನ್ನಂಜೆಯ ಭಾಗೀರಥಿ ಎಂಬವರಿಗೆ ಸೇರಿದ್ದಾಗಿದ್ದು , ಅವರು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ ಚಲಿಸುತ್ತಿದ್ದಾಗ ಇಂಜಿನ್ ನಿಂದ ಮೊದಲು ಬೆಂಕಿಕಾಣಿಸಿಕೊಂಡಿದೆ. ಇದರಿಂದ ಅನುಮಾನಗೊಂಡ ಭಾಗೀರಥಿ ಕೂಡಲೇ ಕಾರನ್ನು ನಿಲ್ಲಿಸಿದ್ದಾರೆ. ಬೆಂಕಿ ವ್ಯಾಪಕವಾಗಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಮಣಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










