ಮಹಾ ಕುಂಭವು ಮೃತ್ಯು ಕುಂಭವಾಗಿ ಬದಲಾಗಿದೆ: ಮಮತಾ ಬ್ಯಾನರ್ಜಿ ವ್ಯಂಗ್ಯ.

66

ಕೋಲ್ಕತ್ತಾ: ಮಹಾ ಕುಂಭಮೇಳವು ಮೃತ್ಯು ಕುಂಭವಾಗಿ ಮಾರ್ಪಟ್ಟಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ವ್ಯಂಗ್ಯ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ದುರುಪಯೋಗದ ಆರೋಪಗಳನ್ನು ಹೊರಿಸಿದ್ದಾರೆ. ನಾನು ಮಹಾ ಕುಂಭಮೇಳವನ್ನು ಗೌರವಿಸುತ್ತೇನೆ. ಪವಿತ್ರ ಗಂಗಾ ಮಾತೆಯನ್ನು ಗೌರವಿಸುತ್ತೇನೆ. ಆದರೆ, ಸರಿಯಾದ ನಿರ್ವಹಣೆ ಇಲ್ಲ. ಶ್ರೀಮಂತರು, ವಿಐಪಿಗಳಿಗೆ 1 ಲಕ್ಷಕ್ಕೂ ಹೆಚ್ಚಿನ ಬೆಲೆಯಲ್ಲಿ ಶಿಬಿರಗಳನ್ನು ಪಡೆಯಲು ವ್ಯವಸ್ಥೆಗಳು ಲಭ್ಯವಿದೆ. ಬಡವರಿಗೆ ಕುಂಭಮೇಳದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಹೆಚ್ಚು ಜನರು ಸೇರುವ ಕಡೆ ಕಾಲ್ತುಳಿತ ಸಾಮಾನ್ಯ. ಆದರೆ, ವ್ಯವಸ್ಥೆಗಳನ್ನು ಮಾಡುವುದು ಮುಖ್ಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.