ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ಈ ದೇಶದ ಪ್ರಧಾನಿ ಆಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ಕೆರೆಕೋಡಿಯಮ್ಮ ಹಾಗೂ ಈಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ್ದು ಪ್ರತಿ ದಿನ ಒಂದು ಧಾರಾವಾಹಿ ಇರಲೇಬೇಕು. ನಿಖಿಲ್ ಕುಮಾರಸ್ವಾಮಿ ಅವರನ್ನ ರಾಜಕೀಯವಾಗಿ ಮುಗಿಸಲೇಬೇಕು ಎಂದು ಯಾವ ರೀತಿ ರಾಜಕೀಯ ಮಾಡಿದ್ರು. ಪಾಪ ಅವನು ಅಮಾಯಕ, ಒಂದು ತಿಂಗಳಿನಿಂದ ಧಾರಾವಾಹಿ ನಡೆಯುತ್ತಿದೆ. ಈ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಸರಿಪಡಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿ ಆಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬೀಗಿದ್ದಾರೆ.
ಇತ್ತೀಚಿಗೆ ರಾಜಕೀಯ ಸಂಘರ್ಷ ನಡೆಯುತ್ತಿದ್ದು, ಕೇಂದ್ರ-ರಾಜ್ಯ ಸರ್ಕಾರದ ನಡುವೆ ವಾಗ್ದಾಳಿ ನಡೆಯುತ್ತಿದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಫೆ.16 ಬಜೆಟ್ ಮಂಡನೆಗೆ ಸಮಯ ನಿಗದಿ ಮಾಡಿದ್ದು, ವಿಧಾನಸಭೆ ಕಲಾಪದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ತೀರ್ಮಾನ ಮಾಡಿದ್ದೇನೆ. ಅಂಕಿ-ಅಂಶಗಳನ್ನಿಟ್ಟುಕೊಂಡು ಚರ್ಚೆ ಮಾಡ್ತೀನಿ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣ ಕೊಡುವ ವ್ಯವಸ್ಥೆ ಆರಂಭವಾಗಿದ್ದು ಯಾವಾಗ? ಈಗ ದೊಡ್ಡಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ನೀವೆ, ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
1952 ಸಂವಿಧಾನದಲ್ಲಿ ಸಂಸ್ಥೆಯನ್ನ ಪ್ರಾರಂಭ ಮಾಡಿದ್ರು. ಅಲ್ಲಿಂದ ಚರ್ಚೆ ಮಾಡಲು ಹೋದ್ರೆ ದೊಡ್ಡ ಕಥೆಯಿದೆ. ಎನ್ಡಿಆರ್ಎಫ್ನಿಂದ ಬಿಡಿಗಾಸು ಕೊಟ್ಟಿಲ್ಲ ಅಂತಾರೆ. ಇವರಿಗೆ ರಾಜಕೀಯ ಗೊತ್ತಿಲ್ಲದೆ ಇದೆಯಾ? ವಿಶೇಷ ಅನುದಾನ ಕೆಲವು ಬಾರಿ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.










