ದಾವಣಗೆರೆ: ತಾಂತ್ರಿಕ ತೊಂದರೆಯಿಂದ ಗ್ಯಾರಂಟಿ ಹಣ ಬಿಡುಗಡೆ ಸಮಸ್ಯೆಯಾಗಿದೆ. ಯುಗಾದಿ ವೇಳೆಗೆ ಎಲ್ಲಾ ಗ್ಯಾರಂಟಿ ಹಣ ಬಿಡುಗಡೆ ಆಗಲಿದೆ ಎಂದು ಶಾಸಕ ಕೆ.ಎಸ್ ಬಸವಂತಪ್ಪ ತಿಳಿಸಿದ್ದಾರೆ. ದಾವಣಗೆರೆಯ ಮಾಯಕೊಂಡದಲ್ಲಿ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಗ್ಯಾರಂಟಿ ಹಣ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸಿ, ಯುಗಾದಿ ಬಂತು, ಅಕ್ಕಂದಿರು ಯುಗಾದಿ ಜೋರು ಮಾಡುತ್ತಾರೆ. ಹಬ್ಬ ಎನ್ನುವಷ್ಟರಲ್ಲಿ ಎಲ್ಲಾ ಹಣ ಬಿಡುಗಡೆ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆವವರು. ಗ್ಯಾರಂಟಿಗೆ ಮಾತ್ರ ಯಾವುದೇ ಕಾರಣಕ್ಕೂ ಹಣ ಕೊರತೆ ಮಾಡಲ್ಲ ಎಂದು ಹೇಳಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ, ನೂತನ ಕಾಯ್ದೆಗೆ ರಾಜ್ಯಪಾಲರ ಮುದ್ರೆ ಬಿದ್ದ ತಕ್ಷಣ ಜಾರಿ ಆಗಲಿದೆ. ಇನ್ನು ಮುಂದೆ ಆದರೂ ಸಾಲ ಕೊಡಲು ಬಂದವರನ್ನು ಊರಿಂದ ಹೊರಗಿಡಿ. ಎಲ್ಲಾ ಸಮಯದಲ್ಲಿ ದುಡಿಮೆ ಒಂದೇ ರೀತಿ ಇರೋದಿಲ್ಲ. ಆಗ ಫೈನಾನ್ಸ್ ನವರು ಕಿರುಕುಳ ಕೊಡುತ್ತಾರೆ. ಆಗ ಅನಾಹುತಗಳು ಆಗುತ್ತವೆ. ನನ್ನ ಕ್ಷೇತ್ರದಲ್ಲಿ ಯಾರಿಗಾದ್ರೂ ಸಮಸ್ಯೆ ಆದ್ರೆ ಹೇಳಿ ಎಂದು ತಿಳಿಸಿದ್ದಾರೆ.










