ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಡಿಫರೆಂಟ್ ಎನಿಸಿಕೊಂಡಿದ್ದು ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ನಿಂದಾಗಿ. ಇಷ್ಟು ದಿನ ಅದೇ ಕಾನ್ಸೆಪ್ಟ್ ಅಡಿಯಲ್ಲಿ ಟಾಸ್ಕ್ ಗಳು ನಡೆಯುತ್ತಿದ್ದವು. ಆದರೆ ಈಗ ರಾತ್ರೋರಾತ್ರಿ ನರಕದ ಗಡಿಯನ್ನು ಮುರಿಯಲಾಗಿದೆ. ನರಕದಲ್ಲಿ ಇದ್ದ ವಸ್ತುಗಳನ್ನು ಒಡೆದು ಹಾಕಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಏಕಾಏಕಿ ಈ ಬದಲಾವಣೆಗಳನ್ನು ಮಾಡಲಾಗಿದೆ. ದೊಡ್ಡದಾಗಿ ಸೈರನ್ ಕೂಗಿತು. ಅದನ್ನು ಕೇಳಿದಾಗ ಎಲ್ಲ ಸದಸ್ಯರಿಗೂ ಶಾಕ್ ಆಯಿತು. ಬಿಗ್ ಬಾಸ್ ಮನೆಯ ಒಳಗೆ ದೊಡ್ಡ ಕ್ರೇನ್ ಬಂತು. ಅದರಿಂದ ಒಂದಷ್ಟು ಜನರು ಬಂದು ಮನೆಯೊಳಗಿನ ವಸ್ತುಗಳಿಗೆ ಹಾನಿ ಮಾಡಲು ಆರಂಭಿಸಿದರು. ಈ ಹಿಂದಿನ ಯಾವುದೇ ಸೀಸನ್ಗಳಲ್ಲೂ ಈ ರೀತಿ ಆಗಿರಲಿಲ್ಲ. ಹಾಗಾಗಿ ಎಲ್ಲರಿಗೂ ಅಚ್ಚರಿ ಆಗಿದೆ. ಸ್ವರ್ಗ ಮತ್ತು ನರಕದ ನಡುವೆ ಇದ್ದ ಗೋಡೆಯನ್ನು ಒಡೆಯಲಾಯಿತು. ನರಕದ ಒಳಗಿನ ವಸ್ತುಗಳನ್ನು ಒಡೆಯಲಾಯಿತು. ಹಾಗಾದರೆ ಇನ್ಮೇಲೆ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಇರುವುದಿಲ್ಲವಾ ಎಂಬ ಪ್ರಶ್ನೆ ಮೂಡಿತು. ನೋಡನೋಡುತ್ತಿದ್ದಂತೆಯೇ ನರಕದ ಗೋಡೆಗಳನ್ನು ಮುರಿದು ಹಾಕಲಾಯಿತು. ಗೋಲ್ಡ್ ಸುರೇಶ್, ಐಶ್ವರ್ಯಾ ಮುಂತಾದವರು ಒಂದು ಕ್ಷಣ ಗಾಬರಿ ಆದರು. ಜಗದೀಶ್ ಮಾತ್ರ ಎಲ್ಲವನ್ನೂ ಎಂಜಾಯ್ ಮಾಡುತ್ತಿದ್ದರು. ಮುಂದೇನಾಗಬಹುದು ಎಂಬ ಟೆನ್ಷನ್ ಬಹುತೇಕರಿಗೆ ಇತ್ತು. ಕಡೆಗೂ ಆಗಿದ್ದೇನು? ನರಕದ ಮನೆಯನ್ನೇ ನಾಶ ಮಾಡಲಾಯಿತು. ಬಳಿಕ ಆ ಬಗ್ಗೆ ಬಿಗ್ ಬಾಸ್ ವಿವರಿಸಿ ಹೇಳಿದರು. ಇಷ್ಟು ದಿನ ಸ್ವರ್ಗ ಮತ್ತು ನರಕ ಎಂಬ ಕಾರಣದಿಂದಲೇ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಗ್ಯಾಪ್ ಉಂಟಾಗಿತ್ತು. ನರಕದಿಂದ ಸ್ವರ್ಗಕ್ಕೆ ಹೋಗಬೇಕು ಎಂಬ ಕಾರಣದಿಂದಲೇ ಟಫ್ ಪೈಪೋಟಿ ನೀಡಲಾಗುತ್ತಿತ್ತು. ಆದರೆ ಈಗ ಆ ಎಲ್ಲ ಜಂಜಾಟಕ್ಕೆ ಪೂರ್ಣ ವಿರಾಮ ಹಾಕಲಾಗಿದೆ. ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಇರುವುದಿಲ್ಲ. ಎಲ್ಲರೂ ಒಂದೇ ಕಡೆ ವಾಸಿಸಲಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಎರಡನೇ ಕ್ಯಾಪ್ಟನ್ ಆಗಿ ಶಿಶಿರ್ ಆಯ್ಕೆ ಆಗಿದ್ದಾರೆ. ಇಷ್ಟು ದಿನಗಳ ಕಾಲ ನರಕದಲ್ಲಿ ಇದ್ದು ಕಷ್ಟ ಅನುಭವಿಸಿದ್ದ ಅವರು ಈಗ ನೇರವಾಗಿ ಕ್ಯಾಪ್ಟನ್ ರೂಮ್ಗೆ ಕಾಲಿಟ್ಟಿದ್ದಾರೆ. ಅವರಿಗೆ ಒಂದಷ್ಟು ಸವಲತ್ತುಗಳು ಸಿಗಲಿವೆ. ಕಳೆದ ವಾರ ಕ್ಯಾಪ್ಟನ್ ಆಗಿದ್ದ ಹಂಸಾ ಅವರು ಸಿಕ್ಕಾಪಟ್ಟೆ ಕಿರಿಕಿರಿ ಅನುಭವಿಸಿದ್ದರು. ಈಗ ಶಿಶಿರ್ ಅವರು ಯಾವ ರೀತಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.










