ವಿಜಯಪುರ: ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪದ ಮೇಲೆ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ವಿನಾಯಕ್ ಟಕ್ಕಳಕಿ ಮೇಲೆ ದೂರು ದಾಖಲಾಗಿದೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿ ಕಳೆದ ಎಂಟು ತಿಂಗಳ ಹಿಂದೆ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿಗೆ ಪರಿಚಯವಾಗಿದ್ದಳು. ಈ ಪರಿಚಯ ಪರಸ್ಪರ ಫೋನ್ ನಂಬರ್ಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿತ್ತು. ಬಳಿಕ ಇಬ್ಬರ ಮಧ್ಯೆ ಪರಸ್ಪರ ವಾಟ್ಸಪ್ ನಲ್ಲಿ ಮೆಸೇಜ್ ಮಾಡೋದು, ಕಾಲ್ ಮಾಡೋದು ಆರಂಭವಾಗಿತ್ತು. ಇದೇ ಸ್ನೇಹ ಇಬ್ಬರ ನಡುವೆ ಪ್ರೀತಿಗೂ ಕಾರಣವಾಗಿತ್ತು.
ಇದೇ ಸಲುಗೆಯಲ್ಲಿ ಮದುವೆಯಾಗುವುದಾಗಿ ಮಾತುಕೊಟ್ಟಿದ್ದರಿಂದ ಯುವತಿ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿಯನ್ನು ನಂಬಿದ್ದಳು.
ಯುವತಿಯ ನಂಬಿಕೆ ದುರುಪಯೋಗಪಡಿಸಿಕೊಂಡ ಪೇದೆ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಯುವತಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ ವಿನಾಯಕ ನಿರಾಕರಿಸುತ್ತಾನೆ. ಇದರಿಂದ ನೊಂದ ಯುವತಿ ಪೇದೆಯಿಂದ ಮೋಸ ಹೋಗಿರುವುದು ತಿಳಿದು ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾಳೆ. ಯುವತಿ ದೂರು ನೀಡುತ್ತಿದ್ದಂತೆ ನಾಪತ್ತೆಯಾದ ಕಾನ್ಸ್ಟೇಬಲ್ ವಿನಾಯಕ, ಬಂಧನ ಭೀತಿಯಿಂದ ಕಳೆದ 20 ದಿನಗಳಿಂದ ಠಾಣೆಗೆ ಬಾರದೆ ತಲೆಮರೆಸಿಕೊಂಡಿದ್ದಾನೆ.
ಸದ್ಯ ನಾಪತ್ತೆಯಾಗಿರುವ ವಿನಾಯಕ ಟಕ್ಕಳಕಿ ಬಂಧನವಾಗಬೇಕು. ಕಾನೂನಿನ ಪ್ರಕಾರ ಆತನಿಗೆ ಶಿಕ್ಷೆ ಆಗಬೇಕು. ಇಲ್ಲವೇ ನನ್ನ ಜೊತೆ ಆತ ಮದುವೆಯಾಗಬೇಕೆಂದು ಯುವತಿ ಪಟ್ಟು ಹಿಡಿದಿದ್ದಾಳೆ. ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿಯ ಲವ್, ಸೆಕ್ಸ್, ದೋಖಾ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ಮುಂದುವರಿಸಿದ್ದಾರೆ.










