ಸಚಿವ ಎನ್.ಎಸ್ ಭೋಸರಾಜು ವಿರುದ್ಧ ಆರ್ ಟಿಐ ಕಾರ್ಯಕರ್ತನಿಂದ ದೂರು.

41

ಬೆಂಗಳೂರು: ರಾಯಚೂರಿನ ಸರ್ವೆ ಸಂಖ್ಯೆ 1252, 125ರಲ್ಲಿನ ಐದು ಎಕರೆ ಅರಣ್ಯ ಭೂಮಿಯನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದ್ದಾರೆ. ಬೋಸರಾಜು ಅವರ ಪತ್ನಿ ಎನ್.ಕೃಷ್ಣ ವೇಣಿ ಹೆಸರಿನಲ್ಲಿ ಅತಿಕ್ರಮಣ ನಡೆದಿದೆ ಎಂದು ಆರೋಪಿಸಿರುವ ಕಲ್ಲಹಳ್ಳಿ, ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸೋಮವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ‘‘ನಾನಾಗಲಿ, ನನ್ನ ಕುಟುಂಬದವರಾಗಲಿ ಇಲ್ಲಿಯವರೆಗೆ ಮೀಸಲು ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ. ವಾಸ್ತವವಾಗಿ, ಅರಣ್ಯ ಅಧಿಕಾರಿಗಳು ನೀಡಿದ ನೋಟೀಸ್ ಈಗಾಗಲೇ ಹೈಕೋರ್ಟ್‍ನ ಕಲಬುರಗಿ ಪೀಠದಿಂದ ರದ್ದುಗೊಳಿಸಲಾಗಿದೆ. 1999 ರಲ್ಲಿ ಸಾರ್ವಜನಿಕ ಜೀವನ ಪ್ರವೇಶಿಸುವ ಮುನ್ನಾ 1987 ರಲ್ಲಿ ಕಾನೂನುಬದ್ಧವಾಗಿ ಭೂಮಿಯನ್ನು ಖರೀದಿಸಲಾಗಿದೆ. ಆಗ ನಾನು ಶಾಸಕ ಅಥವಾ ಎಂಎಲ್‍ಸಿ ಆಗಿರಲಿಲ್ಲ, ಮಂತ್ರಿಯಾಗಿರಲಿಲ್ಲ ಎಂದು ತಿಳಿಸಿದರು. ರಾಜಕೀಯದಲ್ಲಿನ ವಿರೋಧಿಗಳ ಸಂಚಿನಿಂದ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ. ಇದು ನನ್ನ ಮಾನಹಾನಿ ಮಾಡುವ ರಾಜಕೀಯದ ನಡೆಯಾಗಿದೆ. ಆದಾಯ ತೆರಿಗೆ ಸಲ್ಲಿಕೆ ಮತ್ತು ಲೋಕಾಯುಕ್ತಕ್ಕೆ ಅಧಿಕೃತ ಆಸ್ತಿ ಬಹಿರಂಗಪಡಿಸುವಿಕೆ ಎರಡರಲ್ಲೂ ಪಾರದರ್ಶಕವಾಗಿ ತಮ್ಮ ಪತ್ನಿಯ ಹೆಸರಿನಲ್ಲಿರುವ ಎಲ್ಲಾ ಭೂಮಿಯನ್ನು ಘೋಷಿಸಿದ್ದೇನೆ. ತಮ್ಮ ವಿರುದ್ಧದ ಆರೋಪಗಳು ಆಧಾರ ರಹಿತವಾಗಿದ್ದು, ಯಾವುದೇ ಪರಿಶೀಲನೆ ಇಲ್ಲದೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ ಎದು ಸಚಿವರು ಹೇಳಿದರು.