ಬೆಳಗಾವಿ: ವಿಧಾನ ಪರಿಷತ್ ಸದಸ್ಯನನ್ನು ಟೆರರಿಸ್ಟ್ ರೀತಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಬಂಧನ ಹಿನ್ನೆಲೆ ವಿಜಯೇಂದ್ರ ಬೆಳಗಾವಿಗೆ ಭೇಟಿ ನೀಡಿದರು. ಈ ವೇಳೆ ಸುದ್ದಿಗೋಷ್ಠಿಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಅವರಿಗೆ ಗಾಯ ಆಗಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ರಾತ್ರಿಯೆಲ್ಲಾ 400-500 ಕಿ.ಮೀ ಸುತ್ತಾಡಿಸಿದ್ದಾರೆ. ಎಲ್ಲೂ ಕೂಡ ಕೂರುವುದಕ್ಕೆ ಅವಕಾಶ ಕೊಟ್ಟಿಲ್ಲ. ಬೆಂಗಳೂರಿಗೆ ಹಾಜರು ಪಡಿಸುತ್ತೇವೆ ಎಂದು ಗದಗ, ರಾಮದುರ್ಗ ಸೇರಿ ಎಲ್ಲಾ ಪೊಲೀಸ್ ಸ್ಟೇಷನ್ ಸುತ್ತಾಡಿಸಿ ಈಗ ವಾಪಸ್ ಬೆಳಗಾವಿಗೆ ಕರೆತರುತ್ತಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರದ ನಡವಳಿಕೆ, ಸುವರ್ಣಸೌಧದೊಳಕ್ಕೆ ನುಗ್ಗಿ ಕೆಲವು ಪುಡಾರಿಗಳು, ರೌಡಿಗಳು ದಾಂಧಲೆ ನಡೆಸಲು ಹೊರಟಿದ್ದರು. ನಡುರಸ್ತೆಯಲ್ಲಿ ಹಲ್ಲೆ ಮಾಡಲು ಹೋಗಿದ್ದರು. ಹಲ್ಲೆಯಾಗಿದ್ದರೆ ಯಾರು ಕಾರಣ? ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು? ಪೊಲೀಸರದ್ದು ಅತಿರೇಕದ ವರ್ತನೆಯಾಗಿದೆ. ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಈಗಾಗಲೇ ಕರೆ ಕೊಟ್ದಿದ್ದೇವೆ. ಪ್ರಜಾಪ್ರಭುತ್ವದ ಕಗ್ಗೊಲೆಯಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










