ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿ ಹಾಗೂ ಕಹಿ ಸುದ್ದಿಯನ್ನು ಹರಡಿಸಿದ್ದು, ನೌಕರರಿಗೆ ವಿವಿಧ ಜಯಂತಿ ಹಾಗೂ ಹಬ್ಬಗಳಿಗೆ ನೀಡುವ ರಜೆಗಳನ್ನು ರದ್ದುಪಡಿಸಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಮಹಾವೀರ ಜಯಂತಿ, ಮಹರ್ಷಿ ಜಯಂತಿ, ವಾಲ್ಮೀಕಿ ಜಯಂತಿ, ಹಾಗೂ ಕನಕದಾಸ ಜಯಂತಿಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದು ಪಡಿಸಿ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸಬೇಕು ಎಂದು ತಿಳಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೀಡುತ್ತಿದ್ದ ರಜೆಯನ್ನು 1ನೇ ಮತ್ತು 3ನೇ ದಿನ ರಜೆ ನೀಡುವ ಬದಲು 1ನೇ ಮತ್ತು 2ನೇ ದಿನ ರಜೆ ನೀಡಬೇಕೆಂದು ನಿರ್ಧರಿಸಲಾಗಿದೆ. ಮಹಾಲಯ ಅಮವಾಸ್ಯೆ, ಗುಡ್ಫ್ರೈಡೇ, ಈದ್ಮಿಲಾದ್ ಹಬ್ಬಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದು ಪಡಿಸಿ ಎಂದಿನಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದೆ. ಹಾಗೆಯೇ 2ನೇ ಹಾಗೂ 4ನೇ ಶನಿವಾರವೂ ರಾಜ್ಯ ಸರ್ಕಾರಿ ನೌಕರರಿಗೆ ರಜೆ ಸಿಗಲಿದೆ ಎಂದು ಮೂಲಗಳು ತಿಳಿಸಿದೆ.










