ಸಿ.ಟಿ.ರವಿ ಆ ರೀತಿ ಹೇಳಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಲಕ್ಷ್ಮಿ ಹೆಬ್ಬಾಳ್ಕರ್.

35

ಬೆಳಗಾವಿ: ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನ ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತೆ. ಸಿ.ಟಿ.ರವಿ ಅವರು ಆ ರೀತಿ ಹೇಳಿಲ್ಲ ಅನ್ನೋದಾದ್ರೆ, ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಮೇತವಾಗಿ ಬರ್ತೀನಿ. ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ಆಕ್ರೋಶಭರಿತ ನುಡಿಗಳಿವು. ಡಿಸೆಂಬರ್ 19 ರಂದು ಸುವರ್ಣಸೌಧದ ಪರಿಷತ್ ಕಲಾಪದಲ್ಲಿ ಎಂಎಲ್‍ಸಿ ಸಿ.ಟಿ ರವಿ ಅವರು ಸಂವಿಧಾನಿಕ ಪದ ಬಳಸಿ ನಿಂಧಿಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು. ಸಿ.ಟಿ.ರವಿ ಆ ರೀತಿ ಹೇಳಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ ಅಂತ ಸವಾಲ್ ಎಸೆದರು. ಸಿ.ಟಿ.ರವಿ ಈ ರೀತಿ ಅಂದಿದ್ದಾರೆ ಅಂತಾ ನಾನು ನಾಟಕ ಮಾಡೋದಕ್ಕೆ ಆಗುತ್ತಾ? ಸದನದಲ್ಲಿ ನಿಂತು ಸುಳ್ಳು ಆರೋಪ ಮಾಡೋದಕ್ಕೆ ಆಗುತ್ತಾ? ಸುಳ್ಳು ಹೇಳೋದಕ್ಕೆ ನನಗೇನು ಹುಚ್ಚಾ? ನಾಟಕವಾಡಿ ರಾಜಕಾರಣದಲ್ಲಿ ನಾನು ಏನಾದ್ರೂ ಗಳಿಸೋದು ಇದ್ಯಾ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ರು. ಫ್ರೆಟ್ಟ್ರೇಟ್ ಎಂದು ಉಚ್ಚಾರ ಮಾಡಿರುವುದಾಗಿ ಸಿ.ಟಿ ರವಿ ಹೇಳ್ತಾರಲ್ಲಾ? ಎಂಬ ʻಪಬ್ಲಿಕ್ ಟಿವಿʼ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಫ್ರೆಸ್ಟ್ರೇಟ್ ಅನ್ನೋದಕ್ಕೂ ಆಪದಕ್ಕೂ ವ್ಯತ್ಯಾಸ ಇರಲ್ವಾ? ಅವರು ಹೇಳಿರೋದಕ್ಕೆ ಆಡಿಯೋ, ವಿಡಿಯೋ ಎಲ್ಲವೂ ನನ್ನತ್ರ ಸಾಕ್ಷಿ ಇದೆ. ಲಕ್ಷ್ಮಿ ಹೆಬ್ಬಾಳ್ಕರ್‍ನ ನೋಡಿ ಸಾವಿರಾರು ಜನ ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ. ಈಗ ಹೋರಾಟ ಮಾಡಲಿಲ್ಲ ಅಂದ್ರೆ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ. ನಾನು ಸಂಘರ್ಷ ಅಪಮಾನ ಮೆಟ್ಟಿನಿಂತು ಬೆಳೆದಿದ್ದೇನೆ. ಆದ್ರೆ ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತ ಉಂಟಾಗಿದೆ ಎಂದು ನುಡಿದಿದ್ದಾರೆ. ಕೊಲೆಗಾರʼ ಎನ್ನುವಂತಹ ಪ್ರಶ್ನೆ ಯಾಕೆ ಬಂತು? ಎಂಬ ʻಪಬ್ಲಿಕ್ ಟಿವಿʼ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವೆ, ಸಿ.ಟಿ ರವಿ ಆಕ್ಸಿಡೆಂಟ್ ಮಾಡಿರುವ ವೀಡಿಯೋ ನನ್ನ ಬಳಿಯಿದೆ. ಆದ್ರೆ ನಾನು ʻಕೊಲೆಗಾರʼ ಅಂದಿಲ್ಲ ಅಂತ ಹೇಳ್ತಿಲ್ಲ. ಅವರ ಹಾಗೆ ನನಗೆ ಚಪಲಾನಾ, ಪ್ರತಿಯೊಂದಕ್ಕೆ ಎದ್ದು ನಿಂತು ಮಾತಾಡೋದಕ್ಕೆ? ನಾನು ಗಾಂಧಿ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯುತ್ತಿರುವವಳು, ಗೋಡ್ಸೆ ಮಾರ್ಗದಲ್ಲಿ ನಡೆಯುವಂತಹವರಲ್ಲ ಎಂದು ತಿರುಗೇಟು ನೀಡಿದರು.