ಸೋಮಾರಿ ಸಿದ್ದ ಅಂತಾ ನಾನು ಬಳಸಿದ್ದು ಸಿದ್ದರಾಮಯ್ಯರಿಗೆ ಅಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ…

44
firstsuddi

ಮೈಸೂರು: ಸೋಮಾರಿ ಸಿದ್ದ ಎಂಬ ಪದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳಕೆ ಮಾಡಿದ್ದು ಎಂದು ಭಾರೀ ಆಕ್ರೋಶ ಹೊರಬಂದ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸೋಮಾರಿ ಸಿದ್ದ ಅಂತಾ ನಾನು ಬಳಸಿದ್ದು ಸಿದ್ದರಾಮಯ್ಯ ಅವರಿಗೆ ಅಲ್ಲ. ಸೋಮಾರಿ ಸಿದ್ದ ಅನ್ನೋದು ನಾಮ ಪದವಲ್ಲ. ಅದು ಒಂದು ಸಂದರ್ಭ ವಿವರಿಸುವ ನಾಣ್ನುಡಿ ಅಷ್ಟೇ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.

ಕಲ್ಲು ಬಿಸಾಡಿದರೆ ಹಣ್ಣು ಕೊಡೋಕೆ ನಾನು ಮಾವಿನ ಮರ ಅಲ್ಲ, ನಾನು ಪ್ರತಾಪ್ ಸಿಂಹ. ನೀವು ಕಲ್ಲು ಬಿಸಾಕಿದರೆ ನಾನು ಕೂಡ ಕಲ್ಲೇ ಬಿಸಾಕುತ್ತೇನೆ ಎಂದು ಹೇಳುವ ಮೂಲಕ ಸಿಎಂಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರೇ ನೀವು ಮಹಾರಾಜರನ್ನ, ಪ್ರಧಾನಿ ಮೋದಿ, ದೇವೇಗೌಡರು ಮತ್ತು ಯಡಿಯೂರಪ್ಪ ಅವರನ್ನು ಏಕವಚನದಲ್ಲೇ ಸಂಬೋಧನೆ ಮಾಡುತ್ತಿರಿ. ಕಾಂಗ್ರೆಸ್ ಸೇರುವ ಮುನ್ನಾ ಸೋನಿಯಾ ಗಾಂಧಿಯವರನ್ನು ಏಕವಚನದಲ್ಲಿ ಕರೆದವರು ನೀವು. ನಿಮ್ಮಿಂದ ನನಗೆ ಬಹುವಚನ – ಏಕವಚನದ ಪಾಠ ಬೇಡ ಎಂದು ಗರಂ ಆದರು.

ಮಂಗಳವಾರ ನಾನು ಬಳಸಿದ್ದ ನಾಣ್ನುಡಿಯನ್ನು ನಿಮಗೆ ಬಳಸಿದ್ದು ಅಂತಾ ತಿರುಚುವ ಯತ್ನ ನಡೆದಿದೆ. ಮೈಸೂರಿನಲ್ಲಿನ ನಿಮ್ಮ ಹಿಂಬಾಲಕರಿಗೆ ಎಂಪಿ ಟಿಕೆಟ್, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಗ ಕೊಡಿ. ನಿಮ್ಮನ್ನು ಓಲೈಸಲು ನಿಮ್ಮ ಹಿಂಬಾಲಕರು ನನ್ನ ಮೇಲೆ ವಿನಾಕಾರಣ ಸುಳ್ಳು ಸೃಷ್ಟಿ ಮಾಡುತ್ತಾರೆ, ಅವರಿಗೆ ಬೇಗ ಅಧಿಕಾರ ಕೊಡಿ ಎಂದು ಸಂಸದರು ಕಿಡಿಕಾರಿದರು.