ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣವನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಶಿಫಾರಸ್ಸು ಪತ್ರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪತ್ರದಲ್ಲಿ ತಪ್ಪೇನು ಇಲ್ಲ. ಆದರೆ ಈ ಬಗ್ಗೆ ಚರ್ಚೆಯಾಗಿಲ್ಲ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
ಶಾಸಕರು ಹಾಗೂ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೆ ಅದನ್ನು ನಮಗೆ ಕಳುಹಿಸಿ ಕೊಡ್ತಾರೆ. ಆ ಮನವಿ ನನಗೆ ಅಥವಾ ನಮ್ಮ ಇಲಾಖೆಗೆ ಬರುತ್ತದೆ. ಆಗ ನಾವು ಅದನ್ನ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಇಟ್ಟು ಪರಿಶೀಲಿಸುತ್ತೇವೆ. ಸಂಪೂರ್ಣವಾಗಿ ಪರಿಶೀಲನೆ ಮಾಡಿ, ಯಾವ ಸೆಕ್ಷನ್ ಹಾಕಿದ್ದಾರೆ. ಕಾನೂನು ಪ್ರಕಾರ ಇದನ್ನು ವಾಪಾಸ್ ಪಡೆಯಬೇಕೆ? ಇಲ್ಲವೇ ಮುಂದುವರೆಸ ಬೇಕೆ? ಎಂಬ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಇದೆಲ್ಲ ಆದ ಮೇಲೆ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. ಮುಗ್ದರು ಇದ್ದಾರೆ, ಪ್ರಕರಣಕ್ಕೂ ಅದಕ್ಕೂ ಸಂಬಂಧವಿಲ್ಲ ಅಂತ ಸಂಧರ್ಭದಲ್ಲಿ ಕೇಸ್ ತೆಗೆಯಬಹುದು ಎಂಬ ಅಭಿಪ್ರಾಯ ಬಂದರೆ ತೆಗೆಯುತ್ತೇವೆ. ಪ್ರಕರಣ ತೆಗೆಯಬಹುದು ಎಂಬ ಪ್ರಕ್ರಿಯೆ ಮಾಡಿ ಕ್ಯಾಬಿನೆಟ್ ಮುಂದೆ ತರುತ್ತೇವೆ. ಕ್ಯಾಬಿನೆಟ್ನಲ್ಲಿ ಒಪ್ಪಬೇಕು. ಆಗ ಮಾತ್ರ ಕೇಸ್ ವಾಪಸ್ ತೆಗೆಯಲಾಗುತ್ತದೆ ಎಂದು ಹೇಳಿದ್ದಾರೆ.
ಕ್ಯಾಬಿನೆಟ್ ತೀರ್ಮಾನ ಅಂತಿಮ ಆಗಿರುತ್ತದೆ. ಇಷ್ಟೊಂದು ಪ್ರಕ್ರಿಯೆ ಇರುವಾಗ ಪತ್ರ ಬರೆದರು ಎಂದು ಹೇಳಿ ಬೊಬ್ಬೆ ಹೊಡೆದರೆ ಏನು ಮಾಡಬೇಕು? ಡಿಸಿಎಂ ಅವರಿಗೆ ಶಾಸಕರು ಯಾರೋ ಪತ್ರ ಬರೆದಿರುತ್ತಾರೆ. ಅದರ ಆಧಾರದಲ್ಲಿ ಡಿಕೆಶಿ ಪತ್ರ ಬರೆದಿರಬಹುದು. ನಾನು ಇನ್ನೂ ಪತ್ರ ನೋಡಿಲ್ಲ. ನನಗೆ ನೇರವಾಗಿ ಬಂದಾಗ ಕ್ಯಾಬಿನೆಟ್ ಸಬ್ ಕಮಿಟಿಗೆ ಬರೆಯುತ್ತೇನೆ. ಅದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.
ಬಿಜೆಪಿ ಅವಧಿಯಲ್ಲಿ ಎಷ್ಟು ಕೇಸ್ ವಾಪಸ್ ಪಡೆದಿದ್ದಾರೆ ತೋರಿಸಬೇಕಾ? ಬಿಜೆಪಿ ಅವಧಿ ಕೇಸ್ ತೆಗೆದ ಅಂಕಿ ಅಂಶಗಳನ್ನು ಕೊಡುತ್ತೇನೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.










