ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನೀಡಬೇಕು ಎಂದು ಹೊಸಪೇಟೆ ದಲಿತ ಹಕ್ಕುಗಳ ಸಮಿತಿ ಹಾಗೂ ಡಿವೈಎಫ್ವೈ ಸಂಘಟನೆ ಒತ್ತಾಯಿಸಿತು.
ಹೊಸಪೇಟೆ ನಗರದಲ್ಲಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಡಿಎಸ್ಎಸ್ನ ಜಿಲ್ಲಾಧ್ಯಕ್ಷ ಜಂಬಯ್ಯ ನಾಯಕ ಮಾತನಾಡಿ, ಅತ್ಯಾಚಾರಕ್ಕೊಳಗಾದ ಯುವತಿ ವಾಲ್ಮೀಕಿ ದಲಿತಳಾಗಿದ್ದರಿಂದ ತನಿಖೆ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಅಲ್ಲಿಯ ಯೋಗಿ ಸರ್ಕಾರ ಜನಸಾಮಾನ್ಯರ ರಕ್ಷಣೆಯೇ ಇಲ್ಲವಾಗಿದೆ. ಪೊಲೀಸ್ರು ಗುಂಡಾಗಳಂತೆ ಜನರ ಮೇಲೆ ದಬ್ಬಾಳಿಕೆಯನ್ನ ನಡೆಸುತ್ತಿದ್ದಾರೆ. ಅತ್ಯಾಚಾರ ಕೃತ್ಯವನ್ನು ಮಾಡಿರುವ ಆರೋಪಿಗಳಿಗೆ ಶೀಘ್ರದಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಯೋಗಿಯ ಸರ್ಕಾರವನ್ನು ಈ ಕೂಡಲೇ ರಾಜ್ಯಪಾಲರು ವಜಾ ಮಾಡಿ ರಾಜ್ಯಪಾಲರ ಆಡಳಿತ ಮಾಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಯಾಧ್ಯಕ್ಷ ಭಾಸ್ಕರ್ರೆಡ್ಡಿ ಮಾತನಾಡಿ, ಈ ಅಮಾನುಷ ಕೃತ್ಯವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ಕೈಗೊಂಡರೂ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಬಾಯಿ ಬಿಡುತ್ತಿಲ್ಲ, ದೇಶದ ಸಣ್ಣ ವಿಷಯಗಳಿಗೂ ಪ್ರತಿಕ್ರಿಯಿಸುವ ಪ್ರಧಾನಿ ಮೌನ ವಹಿಸಿರುವುದು ಖಂಡನೀಯ ಎಂದರು. ನಂತರ ತಹಶಿಲ್ದಾರ ವಿಶ್ವನಾಥರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಶಿವಕುಮಾರ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಕೆ.ನಾಗರತ್ನಮ್ಮ, ಕರ್ನಾಟಕ ಪ್ರಾಂತರೈತ ಸಂಘ, ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸದಸ್ಯರು ಹಾಗೂ ಇತರರು ಇದ್ದರು.










