10ನೇ ತರಗತಿಯ ಪೂರ್ವಸಿದ್ದತಾ ಪರೀಕ್ಷೆ ನಂತರ ನಾಪತ್ತೆಯಾಗಿದ್ದ ನಾಲ್ವರು ನದಿ ಬಳಿ ಶವವಾಗಿ ಪತ್ತೆ…

56
firstsuddi

ಮಂಗಳೂರು: ಎಸ್‍ಎಸ್‍ಎಲ್‍ಸಿ ಪೂರ್ವಸಿದ್ದತಾ ಪರೀಕ್ಷೆ ನಂತರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.
ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ.

ಯಶ್ವಿತ್ ಚಂದ್ರಕಾಂತ್, ನಿರೂಪ್, ಅನ್ವಿತ್ ಹಾಗೂ ರಾಘವೇಂದ್ರ ಮೃತ ದುರ್ದೈವಿಗಳು. ಪರೀಕ್ಷೆ ಬರೆದು ಈಜಲು ತೆರಳಿದ್ದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮಂಗಳೂರು ತಾಲೂಕಿನ ಸುರತ್ಕಲ್ ಪಟ್ಟಣದ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ವಿದ್ಯಾರ್ಥಿಗಳು, ನಿನ್ನೆ ಎಸ್‍ಎಸ್‍ಎಲ್‍ಸಿ ಇಂಗ್ಲಿಷ್ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆದು ಶಾಲೆಯಿಂದ ಹೊರಬಂದ 4 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಎಷ್ಟು ಸಮಯವಾದರೂ ಮಕ್ಕಳು ಮನೆಗೆ ಬರದ ಹಿನ್ನೆಲೆ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಈಗ ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರ ಶವ ಪತ್ತೆಯಾಗಿದೆ. ಪರೀಕ್ಷೆ ನಂತರ ನದಿಗೆ ಈಜಲು ಹೋಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.