ಮಂಗಳೂರು: ನಿನ್ನೆ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ಬೆಳಿಗ್ಗೆ ದೆಹಲಿಗೆ ವಾಪಾಸ್ ಆಗಿದ್ದಾರೆ. ಏಕಕಾಲದಲ್ಲಿ ವಾರಾಣಸಿ ಹಾಗೂ ಮಂಗಳೂರಿನಲ್ಲಿ ಆರ್ಎಸ್ಎಸ್ ಬೈಠಕ್ ಆಯೋಜಿಸಲಾಗಿದ್ದು, ಆರ್ಎಸ್ಎಸ್ ನ ದಕ್ಷಿಣದ ಶಕ್ತಿ ಕೇಂದ್ರ ಮಂಗಳೂರಿನ ಸಂಘನಿಕೇತನದಲ್ಲಿ ಪ್ರಚಾರಕರ ಬೈಠಕ್ ನಡೆದಿದ್ದು, ಈ ಬೈಠಕ್ ನಲ್ಲಿ ಅಮಿತ್ ಶಾ ಭಾಗವಹಿಸಿದ್ದರು. ಕರ್ನಾಟಕ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕೇರಳ, ರಾಜಸ್ಥಾನ,ಗೋವಾ, ಸೇರಿದಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಬೈಠಕ್ ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಆರ್ಎಸ್ಎಸ್ ಮುಖಂಡರೊಂದಿಗೆ ರಾಮ ಮಂದಿರ, ಶಬರಿಮಲೆ, ಲೋಕಸಭೆ ಚುನಾವಣೆ ವಿಚಾರದ ಬಗ್ಗೆ ನಿನ್ನೆ ರಾತ್ರಿಯೇ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಅಮಿತ್ ಶಾ ಅವರು ಮಂಗಳೂರುನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ತಿಳಿದು ಬಂದಿದೆ.










