ಕರೋನಾ ವೈರಸ್ ಭೀತಿ ; ಉಡುಪಿ ಜಿಲ್ಲಾಸ್ಪತ್ರೆಗೆ ನಾಲ್ವರು ದಾಖಲು…

176
firstsuddi

ಉಡುಪಿ: ಇತ್ತೀಚೆಗೆ ಚೀನಕ್ಕೆ ತೆರಳಿ 15 ದಿನಗಳ ಹಿಂದೆ ಸ್ವದೇಶಕ್ಕೆ ಮರಳಿದ ಉಡುಪಿ ಜಿಲ್ಲೆಯ ಒಟ್ಟು ನಾಲ್ಕು ಮಂದಿಯನ್ನು ಸಂಶಯಾಸ್ಪದ ಕೊರೊನಾ ವೈರಸ್ಗೆ ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮೂವರು ಬ್ರಹ್ಮಾವರದ ಒಂದೇ ಕುಟುಂಬದವರಾಗಿದ್ದು ಮತ್ತೋರ್ವ ವ್ಯಕ್ತಿ ಕಾಪುವಿನರೆಂದು ಹೇಳಲಾಗಿದೆ. ದಾಖಲಾದ ಪೈಕಿ ಇಬ್ಬರಿಗೆ ಸಾಮಾನ್ಯ ಶೀತ, ಕೆಮ್ಮು ಇದ್ದು ಮುಂಜಾಗರೂಕತಾ ಕ್ರಮವಾಗಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ನಾಲ್ವರು ಕೂಡಾ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಇವರ ರಕ್ತ ಹಾಗೂ ಗಂಟಲಿನ ದ್ರವವನ್ನು ಕೊರೊನಾ ವೈರಸ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು ವರದಿಯನ್ನು ನೀರಿಕ್ಷಿಸಲಾಗುತ್ತಿದೆ. ಇದು ಸಾಮಾನ್ಯ ಶೀತ ಕೆಮ್ಮು ಆಗಿದ್ದು, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಕೆಎಂಸಿ ಮಣಿಪಾಲ ಸ್ಪಷ್ಟನೆ

ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟ ಪಡಿಸಿದ್ದಾರೆ. ಮಣಿಪಾಲದ ಕಸ್ತೂರ್‌ ಬಾ ಆಸ್ಪತ್ರೆಯಲ್ಲಿ ಇದುವರೆಗೆ ಯಾವುದೇ ರೋಗಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ