ಮೈಸೂರು : ದಂಪತಿ ಜಗಳದ ನಡುವೆ ಮಧ್ಯಪ್ರವೇಶಿಸಿದ ಮಾವನನ್ನು ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ. ಸಲೀಂ(50) ಅಳಿಯನಿಂದ ಕೊಲೆಯಾದ ಮಾವ ಎಂದು ಗುರುತಿಸಲಾಗಿದ್ದು, ಅಳಿಯ ನದೀಂ ಅಹ್ಮದ್ ಖಾನ್ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ನದೀಂ ಅವರು ತಮ್ಮ ಪತ್ನಿ ಹಸೀನಾ ಅವರ ಶೀಲವನ್ನು ಶಂಕಿಸುತ್ತಿದ್ದರು. ಇದೇ ವಿಚಾರವಾಗಿ ಪ್ರತಿ ದಿನ ಇಬ್ಬರ ನಡುವೆ ಜಗಳವಾಗುತ್ತಿತ್ತು. ಪ್ರತಿ ಬಾರಿ ಇಬ್ಬರು ಜಗಳ ಮಾಡುವಾಗ ಮಾವ ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸುತ್ತಿದ್ದರು. ಅದರಂತೆ ಇಂದು ಮುಂಜಾನೆಯು ಕೂಡಾ ಇಬ್ಬರು ಜಗಳವಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಮಾವನಿಗೆ ನದೀಂ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಲೀಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಲೀಂ ಅವರು ಮೃತಪಟ್ಟಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










