ಮಂಡ್ಯ : ಇಂದಿಗೆ ಪುಲ್ವಾಮ ದಾಳಿ ಸಂಭವಿಸಿ ಒಂದು ವರ್ಷ ಕಳೆದಿದ್ದು, ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಲ್ಲಿರುವ ಸಿ.ಆರ್.ಪಿ.ಎಫ್ ಯೋಧ ಗುರು ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುರು ಅವರ ತಾಯಿ ಚಿಕ್ಕತಾಯಮ್ಮ ಅವರು, ಈ ಘಟನೆಯಿಂದ ನನಗೆ ಬಹಳ ಸಂಕಟವಾಗುತ್ತದೆ. ನನ್ನ ಮಗ ಇನ್ನು ಹಿಂದಿರುಗಿ ಬರುವುದಿಲ್ಲ. ಆದರೆ ಇಂದು ನಾವು ಸಮಾಧಿ ಬಳಿ ಪೂಜೆಯನ್ನು ಇಟ್ಟುಕೊಂಡಿದ್ದೇವೆ. ನನ್ನ ಸೊಸೆ ಕಲಾವತಿ ಈಗಾ ನಮ್ಮೊಂದಿಗೆ ಇಲ್ಲ. ಅವಳು ತನ್ನ ತಂದೆಯ ಮನೆಯಲ್ಲಿ ಇದ್ದಾಳೆ. ನಮ್ಮ ಮನೆಗೆ ಬರುತ್ತಿಲ್ಲ. ಹಣದ ವಿಚಾರವಾಗಿ ಇಬ್ಬರ ಮನೆಯವರು ಕುಳಿತು ಹಣವನ್ನು ಹಂಚಿಕೊಂಡಿದ್ದೇವೆಯೇ ಹೊರತು ನಾವು ಜಗಳ ಮಾಡಿಕೊಂಡಿಲ್ಲ. ಎಷ್ಟೇ ಹಣ ಇದ್ದರೂ ನಮ್ಮ ಮಗ ಇದ್ದ ಹಾಗೆ ಆಗುವುದಿಲ್ಲ. ನನ್ನ ಮಗ ಒಂದು ವೇಳೆ ಬದುಕಿದ್ದರೆ ಅದರ ಹತ್ತರಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದ. ನನ್ನ ಸೊಸೆ ಪೂಜೆ ಸಲ್ಲಿಸಲು ಬರುತ್ತಾಳೋ ಇಲ್ಲವೋ ನನಗೆ ಗೊತ್ತಿಲ್ಲ. ನಮ್ಮ ಸೊಸೆ ಈಗ ನಮ್ಮೊಂದಿಗೆ ಇಲ್ಲ. ನಮ್ಮ ಸಂಪರ್ಕದಲ್ಲೂ ಇಲ್ಲ. ನನ್ನ ಮಗ ಇದ್ದಾಗ ನಾನು ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತಿದೆ. ನಮ್ಮ ಬಳಿ ಏನೇ ಜಗಳವಾದರೂ ಗುರು ಅದನ್ನು ಸರಿಪಡಿಸುತ್ತಿದ್ದನು. ದೇಶ ಕಾಯುವ ಜೊತೆಗೆ ನಮ್ಮನ್ನೂ ಕಾಯುತ್ತಿದ್ದನು. ಈಗ ಅವನು ದೇಶದ ಮಗನಾಗಿದ್ದಾನೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಂಬ ಹೆಮ್ಮೆ ನಮಗಿದೆ ಎಂದು ಕಣ್ಣೀರಾಕಿದರು.










