ಕೊಪ್ಪಳ : ಮಹಾಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ 105 ವರ್ಷದ ಅಜ್ಜಿ ಗುಣಮುಖರಾಗಿದ್ದಾರೆ. ಕೊಪ್ಪಳ ತಾಲ್ಲೂಕಿನ ಕಾತರಕಿ ಗ್ರಾಮದ ಅಜ್ಜಿ ಕಮಲಮ್ಮ ಲಿಂಗನಗೌಡ ಹಿರೇಗೌಡ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಮಲಮ್ಮ ಅವರಿಗೆ ಕಳೆದ ವಾರವಷ್ಟೇ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಅಜ್ಜಿ ಕೊಪ್ಪಳದಲ್ಲಿ ಇರುವ ತಮ್ಮ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಂ ಐಸೋಲೇಶನ್ ಆಗಿ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅಜ್ಜಿಗೆ ಜ್ವರ ಬಿಟ್ಟರೆ ಬೇರೆ ಯಾವುದೇ ತೊಂದರೆ ಇಲ್ಲದ ಕಾರಣ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಅಜ್ಜಿಗೆ ತಮ್ಮ ಮೊಮ್ಮಗ ಡಾ. ಶ್ರೀನಿವಾಸ್ ಗೌಡ ಅವರು ಚಿಕಿತ್ಸೆ ನೀಡಿದ್ದು, ಒಂದು ವಾರಗಳ ಕಾಲ ಚಿಕಿತ್ಸೆ ಪಡೆದ ಅಜ್ಜಿ ಮಹಾಮಾರಿ ಕೊರೊನಾ ಸೋಂಕನ್ನು ಗೆದ್ದು ಬಂದಿದ್ದಾರೆ.










