ಕಳಸ : ಗ್ರಾಮೀಣ ಭಾಗದ ಬಡ ಕುಟುಂಬಗಳು ರೈತರು ಹಾಗೂ ನಿರುದ್ಯೋಗಿಗಳ ಬದುಕಿನಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಸಹಕಾರಿಯಾಗಿರುವ ರಾಜ್ಯದ ಏಕೈಕ ಸಂಸ್ಥೆ ಅಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಕಳಸ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್ ಡಾ|ಮೋಹನ್ ರಾಜಣ್ಣ ಹೇಳಿದರು.
ಪಟ್ಟಣದ ಮಹಾವೀರ ಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಆಯೋಜಿಸಿದ್ದ ಒಕ್ಕೂಟ ಪದಾಧಿಕಾರಿಗಳ ತರಭೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ನಾಯಕ ಆಗಬೇಕೆಂದು ಹೊರಡುವ ಮುನ್ನ ಮನಸ್ಸನ್ನು ತೆರೆದಿಡಿ, ನಾನೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ ನಾಯಕನಾಗುವುದು ಮತ್ತು ನಾಯಕನಾಗಿಯೇ ಉಳಿಯುವುದು ಸುಲಭದ ಮಾತಲ್ಲ. ಅವನನ್ನು ಎಲ್ಲರೂ ನೋಡುತ್ತಾ ಇರುತ್ತಾರೆ. ನಾಯಕನಾದವನ ವರ್ತನೆ ಮತ್ತು ಚಿಂತನೆ ಇತರರಿಗೆ ಮಾದರಿಯಾಗಬೇಕು ಎಂದರು.
ಮೇಲ್ವಿಚಾರಕ ನಾಗರಾಜ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಗಳಿಂದ ಎಲ್ಲರೂ ಸ್ವಾಭಿಮಾನಿಗಳಾಗಿ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಯೋಜನೆಯಲ್ಲಿ ಸಂಪೂರ್ಣವಾಗಿ ಯಶಸ್ವಿಗೊಂಡ ಸಂಸ್ಥೆ ಎಂದರೆ ಅದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಎಂದರು.
ಕಾರ್ಯಕ್ರಮದಲ್ಲಿ ಯಾಜನಾಧಿಕಾರಿ ವಿಠಲ ಪೂಜಾರಿ, ಕೃಷಿ ಮಾಹಿತಿಗಾರ ಹರೀಶ್, ಕಳಸ ಒಕ್ಕೂಟದ ಅಧ್ಯಕ್ಷೆ ಸುಜಯ, ಚಂದ್ರಶೇಖರ, ಉಷಾ, ಅಶ್ವಿನಿ, ಅನುರಾದ, ಕಾರ್ತಿಕ್, ಅಶ್ವಿನಿ, ಶೋಭ, ಭವ್ಯ ಇತರರು ಇದ್ದರು.










