ಚಿಕ್ಕಮಗಳೂರು : ಕಾರಿನಲ್ಲಿ 500 ರೂ. ಮುಖಬೆಲೆಯ 50 ಲಕ್ಷದ ಐವತ್ತು ಸಾವಿರ ರೂ. ನಕಲಿ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಆಲ್ದೂರು ಸಮೀಪದ ಹಾಂದಿಯಲ್ಲಿ ನಡೆದಿದೆ. ಬಂಧಿತರನ್ನು ಸಂತೋಷ್, ರಿಯಾಸ್, ಜುಬೇದ್ ನಜೀರ್ ಎಂದು ಗುರುತಿಸಲಾಗಿದೆ. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ ಹಾಗೂ ಉಜಿರೆ ಭಾಗದಿಂದ ನಕಲಿ ನೋಟುಗಳನ್ನು ಸಾಗಿಸುತ್ತಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ವಿಚಾರಣೆ ವೇಳೆ ರೆಡ್ ಮರ್ಕ್ಯುರಿ ಕೊಳ್ಳಲು ತೆರಳುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರಿನ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಹಳೇ ರೇಡಿಯೋ ಹಾಗೂ ಟಿವಿಗಳಲ್ಲಿ ರೆಡ್ ಮರ್ಕ್ಯುರಿಗಾಗಿ ನಕಲಿ ಹಣದೊಂದಿಗೆ ಬರುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ಸಂತೋಷ್ ಎಂಬುವವರು ನಿಮಗೆ ರೆಡ್ ಮರ್ಕ್ಯುರಿ ಕೊಡಿಸುವ ಜವಾಬ್ದಾರಿ ನನ್ನದು, ಅದು ತುಂಬಾ ದುಬಾರಿ, ಹಣವನ್ನು ಹೊಂದಿಸಿ ಎಂದು ಮತ್ತೊಬ್ಬ ಆರೋಪಿ ನಜೀರ್ ಗೆ ತಿಳಿಸಿದ್ದರು. ಆರೋಪಿ ನಜೀರ್ ಗ್ರಾಹಕನ ರೀತಿಯಲ್ಲಿ ಬಂದ ಮತ್ತೊಬ್ಬ ಆರೋಪಿ ಜುಬೇದ್ ನಿಂದ ಹಣ ತರಲು ಮುಂದಾಗುತ್ತಾರೆ. ಬಳಿಕ ಹತ್ತು ಲಕ್ಷಕ್ಕೆ ರೆಡ್ ಮರ್ಕ್ಯುರಿ ಕೊಳ್ಳಲು ಹಣದೊಂದಿಗೆ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಆಲ್ದೂರು ಬಳಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮತ್ತೊಂದು ಕಾರಿನಲ್ಲಿ 500 ರೂ. ಮುಖಬೆಲೆಯ ಐದು ಲಕ್ಷದ ಐವತ್ತು ಸಾವಿರ ರೂ ನಕಲಿ ನೋಟಿನೊಂದಿಗೆ ನಜೀರ್ ಹಾಗೂ ಸಂತೋಷ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.










