ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಸಚಿವ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದಲ್ಲದೇ ಮತ್ತೆ ಗೆದ್ದು ಬಂದು ವಿಜಯನಗರ ಜಿಲ್ಲೆಯನ್ನು ಮಾಡಿದ ಜನಾನುರಾಗಿ ನಾಯಕರಾಗಿದ್ದಾರೆ ಎಂದು ರಾಜ್ಯ ರೈತರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಶರಣೇಗೌಡ ಕೇಸರಟ್ಟಿ ಅಭಿಪ್ರಾಯಪಟ್ಟರು.
ಅವರು ವಿಜಯನಗರ ಹೊಸ ಜಿಲ್ಲೆ ರಚನೆಯ ರೂವಾರಿ ಸಚಿವ ಆನಂದ್ ಸಿಂಗ್ರನ್ನು ರಾಜ್ಯ ರೈತರ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವೇದಿಕೆಯ ಸಂಘಟನೆ ಕಾರ್ಯಕರ್ತರೊಂದಿಗೆ ಸನ್ಮಾನಿಸಿ ಮಾತನಾಡಿದರು.
ನೂತನ ಜಿಲ್ಲೆಯು ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗಿದ್ದಲ್ಲದೇ ಪಶ್ಚಿಮ ತಾಲೂಕಿನ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಗಂಗಾವತಿಯ ಬಡ ರೈತನ ಮಗಳು ಬೆಂಗಳೂರಿನ ಜಿಕೆ ವಿಕೆನಲ್ಲಿ ಬಿಎಸ್ಸಿ( ಅಗ್ರಿ)ಗೆ ಸರಕಾರಿ ಸೀಟ್ ದೊರೆತರೂ ಹಣಕಾಸಿನ ಸಮಸ್ಯೆಯಿಂದ ವಿದ್ಯಾಭ್ಯಾಸ ನಿಲ್ಲಿಸುವ ನಿರ್ಧಾರ ಮಾಡಿದ್ದ ವಿದ್ಯಾರ್ಥಿನಿಗೆ ವಿದ್ಯಾಭ್ಯಾಸದ ಎಲ್ಲಾ ಖರ್ಚುಗಳನ್ನು ಭರಿಸುವುದಾಗಿ ಸಚಿವ ಆನಂದ್ಸಿಂಗ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಯರಡೊಣ, ಗಂಗಾವತಿ ತಾಲೂಕಾಧ್ಯಕ್ಷ ಪಂಪಯ್ಯ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಕಾವ್ಯ ಹಿರೆಕುರಬರ, ರೈತ ಎಸ್.ತಿಮ್ಮಣ್ಣ ಹಾಗೂ ಇತರರು ಇದ್ದರು.










