ಬೆಂಗಳೂರು : ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನಲೆ ಕೆ.ಆರ್.ಪುರದ ಐಟಿಐ ವಿದ್ಯಾ ಮಂದಿರ ಶಾಲೆ, ಕೆ.ಆರ್ ಪುರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ, ವೆಂಕಟೇಶ್ವರ ಆಂಗ್ಲ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಜ್ಯಾದ್ಯಂತ 99.6% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲಾ ಮಕ್ಕಳು ಲವಲವಿಕೆಯಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಾದ್ಯಂತ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾತನಾಡಿದ ಅವರು, ಶಾಲೆಗಳ ಪುನರಾರಂಭಕ್ಕೆ ಇನ್ನೂ ಆಲೋಚನೆ ಮಾಡಿಲ್ಲ, ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು ಸೋಮವಾರ ಆಯುಕ್ತರು ವರದಿ ನೀಡಿದ ಬಳಿಕ ಶಾಲೆಗಳ ಆರಂಭಿಸುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಐಸಿಎಂಆರ್ ನಿಂದಲೂ ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ವರದಿ ಬಂದಿದೆ. ಇದರೊಂದಿಗೆ ದೇವಿ ಶೆಟ್ಟಿ ಅವರು ಕೊಟ್ಟಿರುವ ವರದಿಯನ್ನು ಅಧ್ಯಯನ ಮಾಡಿ ತದನಂತರ ಶಾಲೆಗಳನ್ನು ಅರಂಭಿಸುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.










