ಕೊಟ್ಟಿಗೆಹಾರ : ಹೊರರಾಜ್ಯದಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಮೇಲೆ ನಿಗಾ ವಹಿಸುವಂತೆ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.
ಕೊಟ್ಟಿಗೆಹಾರ ಚೆಕ್ಪೋಸ್ಟ್, ಚಾರ್ಮಾಡಿ ಘಾಟ್ ಗೆ ಎಸ್.ಪಿ ಎಂ,ಎಚ್ ಅಕ್ಷಯ್ ಹಾಗೂ ತಾಲ್ಲೂಕು ಅಧಿಕಾರಿಗಳ ತಂಡಗಳೊಂದಿಗೆ ಬೇಟಿ ನೀಡಿ ಮಾತನಾಡಿದ ಅವರು, ಹೊರರಾಜ್ಯದಿಂದ ಜಿಲ್ಲೆಗೆ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ. ಚಾರ್ಮಾಡಿ ಘಾಟ್ ನಲ್ಲಿ ಬಾರಿ ವಾಹನಗಳು ಸಂಚರಿಸಲು ಅವಕಾಶವಿಲ್ಲ. ರಾತ್ರಿ ಸಮಯದಲ್ಲಿ ತುರ್ತು ವಾಹನಗಳು ಹೊರತು ಪಡಿಸಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇದಿಸಲಾಗಿದೆ ಎಂದರು.
ನಂತರ 2019 ರಲ್ಲಿ ನೆರೆ ಹಾವಳಿಯಿಂದ ನಿರಾಶ್ರಿತ ನೆರೆ ಸಂತ್ರಸ್ಥರಿಗೆ ಪರ್ಯಾಯ ಜಾಗ ನೀಡಲಾದ ಬಣಕಲ್ ಸಮೀಪದ ಸುಣ್ಣದ ಗೂಡು ಗ್ರಾಮಕ್ಕೆ ಬೇಟಿ ನೀಡಿ ನೆರೆ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿದರು. ಪರ್ಯಾಯ ಜಾಗ ನೀಡಿದ ಪ್ರದೇಶದಲ್ಲಿ ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ತಹಶೀಲ್ದಾರ್ ನಾಗರಾಜ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಬಣಕಲ್ ಠಾಣೆ ಪಿಎಸ್ಐ ಗಾಯತ್ರಿ, ಬಣಕಲ್ ಆರ್.ಐ ಮಂಜುನಾಥ್, ಬಾಳೂರು ಆರ್.ಐ ಗಿರೀಶ್, ಮುಂತಾದವರು ಇದ್ದರು.










