ಬೆಂಗಳೂರು : ಸಿದ್ದರಾಮಯ್ಯ ಘನತೆ ಗೌರವ ಬಿಟ್ಟು ಅಸಭ್ಯವಾಗಿ ಮಾತನಾಡುವ ಅಭ್ಯಾಸ ಮಾಡ್ಕೊಂಡಿದಾರೆ. ಯಾವುದೇ ಟೀಕೆ ಎಲ್ಲೆ ಮೀರಬಾರದು. ಆದರೆ, ಇತ್ತೀಚೆಗೆ ಕನ್ನಡದ ಸಂಸ್ಕೃತಿಗೆ ತಕ್ಕಂತೆ ಅವರ ಮಾತುಗಳು ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಆರ್ಎಸ್ಎಸ್ನಿಂದ ಹಿಡಿದು ನರೇಂದ್ರ ಮೋದಿ ಅವರಿಗೆ ಏಕವಚನ ಬಳಸುವವರೆಗೆ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅಸಹಾಯಕರಾಗಿ ಹೀಗೆ ಮಾತನಾಡುತ್ತಿದ್ದೀರೋ? ಸಂಸ್ಕಾರದ ಕೊರತೆ ಆಗಿ ಹೀಗೆಲ್ಲ ಮಾತನಾಡುತ್ತಿದ್ದೀರಾ? ರಾಷ್ಟ್ರೀಯ ನಾಯಕರನ್ನು ಮೆಚ್ಚಿಸಲಾ? ಸಕಾರಾತ್ಮಕ ಟೀಕೆ ಮೂಲಕ ಸರ್ಕಾರನ ಎಚ್ಚೆರಿಸುವುದು ವಿಪಕ್ಷದ ಕೆಲಸ. ಹಾಗಂತ ಆರ್ಎಸ್ಎಸ್ ಅನ್ನು ಜರಿಯುವುದಿಲ್ಲ. ಅದರಿಂದಲೇ ಬೆಳೆದವರು ನಾವು ಎಂದರು.
ಸಂಸ್ಕಾರ, ದೇಶಭಕ್ತಿ, ವ್ಯಕ್ತಿ ನಿರ್ಮಾಣವನ್ನು ಆರ್ಎಸ್ಎಸ್ ಮಾಡುತ್ತದೆ. ಈ ವಿಷಯದಲ್ಲಿ ಮಾಹಿತಿ, ಜ್ಞಾನದ ಕೊರತೆ ನಿಮಗೆ ಇದ್ದಂತೆ ಇದೆ. ನಿಮಗೆ ಸಲಹೆ ಕೊಡುತ್ತಿರುವವರಿಗೆ ಅನುಭವದ ಕೊರತೆ ಇದೆ ಅನಿಸುತ್ತದೆ. ಅನುಭವಿಗಳು ಮತ್ತು ಉತ್ತಮರ ಸಹವಾಸ ಮಾಡಿ ಎಂದು ಕಿವಿ ಮಾತು ಹೇಳಿದ ಅವರು, ಜಗತ್ತಿನ ನಾಯಕರು ಮೋದಿಯವರನ್ನು ಮೆಚ್ಚಿಕೊಂಡಿದ್ದಾರೆ. ಎಚ್ಚರಿಕೆಯಿಂದ ಮಾತನಾಡುವುದು ಹಿರಿತನಕ್ಕೆ ಒಳಿತು ಎಂದು ಕುಟುಕಿದರು.
ನಾನು ನಿಮ್ಮ ಸಮಕಾಲೀನರಲ್ಲ. ಹಿರಿಯರಿಂದ ಕಲಿಯಬೇಕೆಂದು ರಾಜಕಾರಣಕ್ಕೆ ಬಂದೆವು. ನಿಮ್ಮಲ್ಲಿ ನೋಡಿ ಕಲಿಯುವಂತಹ ಗುಣ ಕಡಿಮೆ ಆಗುತ್ತಿದೆ ಎಂದರು.
ಕೇಸರಿ ಬಗ್ಗೆ ನಿಮಗೆ ಜಿಗುಪ್ಸೆ ಏಕೆ? ಅದು ತ್ಯಾಗದ ಸಂಕೇತ, ರಾಷ್ಟ್ರೀಯತೆಯನ್ನು ಬಿಂಬಿಸುತ್ತದೆ. ಯಾಕೆ ಕೇಸರಿ ಕಂಡರೆ ವಿಚಲಿತರಾಗುತ್ತೀರಿ? ಗೊಂದಲಕ್ಕೆ ಒಳಗಾಗುತ್ತೀರಿ? ಎಂದು ಪ್ರಶ್ನಿಸಿದರು. ಸಿಎಂ ಆಗಿದ್ದಾಗ ಕುಂಕುಮ ಇಟ್ಟ ಕಾರ್ಯಕರ್ತರನ್ನು ದೂರ ಇಟ್ಟಿರಿ. ಭಾರತ ತ್ಯಾಗದ ಸಂಕೇತ, ಕೇಸರಿ ಕೂಡ ತ್ಯಾಗದ ಸಂಕೇತ. ಎರಡೂ ಒಂದನ್ನೊಂದು ಬಿಟ್ಟಿಲ್ಲ ಎಂದು ಹೇಳಿದರು.
ವಿಜಯ ದಶಮಿಯಂದು ಆಯುಧ ಪೂಜೆ ಮಾಡುವುದು ಈ ನಾಡಿನ ಪರಂಪರೆ. ಆಗ ಕೇಸರಿ ಶಾಲು ಹಾಕಿದ್ದನ್ನ ಟೀಕಿಸುವ ನಿಮಗೇಕೆ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಇರುವಾಗಷ್ಟೇ ಸರ್ಕಾರಿ ನೌಕರರು ಪೂಜೆ ಮಾಡಿಲ್ಲ. ಅವರು ಕರ್ತವ್ಯ ಮಾಡುವಾಗ ಹಾಕಿದ್ದಲ್ಲ, ಪೂಜೆ ಮಾಡುವಾಗ ಹಾಕಿದ್ದು. ಯಾರೇ ಕೇಸರಿ ಶಾಲು ಹಾಕಿದರೂ ಬೆಂಬಲಿಸುತ್ತೇನೆ ಎಂದರು.










