ನವದೆಹಲಿ: ರಾಜಧಾನಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಕೇಂದ್ರ ಸರ್ಕಾರಕ್ಕೆ ಕಣ್ಣೀರು ಹರಿಸಿದೆ. ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 70 ರೂ.ಗಳನ್ನು ಮೀರಿದೆ.
ಈ ಹಿನ್ನೆಲೆಯಲ್ಲಿ ಉಳ್ಳಾಗಡ್ಡಿ ಪೂರೈಕೆ ಹೆಚ್ಚಿಸಲು ಕೇಂದ್ರ ಅಗತ್ಯ ಕ್ರಮ ಕೈಗೊಂಡಿದೆ. ಒಂದು ವಾರದಲ್ಲಿ ಪರಿಸ್ಥಿತಿ ಸುಧಾರಣೆಯಾಗಲಿದೆ. ಹೊಸ ಹಂಗಾಮಿನ ಈರುಳ್ಳಿ ಮಾರುಕಟ್ಟೆಗೆ ಬಂದ ಕೂಡಲೆ ಈರುಳ್ಳಿ ಬೆಲೆ ಇಳಿಯಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಮಹಾರಾಷ್ಟ್ರದಿಂದ 10 ಸಾವಿರ ಟನ್ ಈರುಳ್ಳಿ ಖರೀದಿಸಿ ಅಗತ್ಯವಿರುವ ಸ್ಥಳಗಳಲ್ಲಿ 32 ರೂ.ಗಳ ದರದಲ್ಲಿ ಮಾರಾಟ ಮಾಡುವಂತೆ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಕ್ಕೆ(ನಫೆಡ್) ಸಚಿವಾಲಯ ಈಗಾಗಲೆ ತಿಳಿಸಿದೆ










